Mangalore jewellery staff murder case : ಮಂಗಳೂರು : ನಗರದ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಹಾಡಹಗಲೇ ಓರ್ವ ವ್ಯಕ್ತಿ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ (Mangalore jewellery staff murder case) ಘಟನೆ ತಿಂಗಳ ಹಿಂದೆ ನಡೆದಿತ್ತು. ಈ ಪ್ರಕರಣ ಸಂಬಂಧ ಕೇರಳದ ಕಾಸರಗೋಡಿನಲ್ಲಿ ಆರೋಪಿ ಸೆರೆ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ. ಈತನ ಮೂಲ ಉದ್ದೇಶ ದರೋಡೆ ಎಂದು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ತಿಳಿದು ಬಂದಿದೆ. ಇನ್ನೇನಾದರೂ ಬೇರೆ ಕಾರಣಕ್ಕಾಗಿ ಈ ಕೊಲೆ ನಡೆದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇರಳದ ಕಲ್ಲಿಕೋಟೆಯ ಚಟ್ನಾಡುತ್ ಕೆಳಮನೆ ನಿವಾಸಿ ಶಿಫಾಸ್(33) ಎಂಬಾತನೇ ಬಂಧಿತ ಆರೋಪಿ. ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಸದ್ಯಕ್ಕೆ ಕೇರಳ ಪೊಲೀಸರು ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಕಾಸರಗೋಡಿನ ಡಿವೈಎಸ್ಪಿ ಸುಧಕರನ್ ನೇತೃತ್ವದಲ್ಲಿ ಈ ಕಾರ್ಯಾಚಾರಣೆ ಆಗಿದ್ದು, ಇಲ್ಲಿನ ಪೊಲೀಸ್ ತಂಡದಿಂದ ಆರೋಪಿಯ ಬಂಧನವಾಗಿದೆ. ಈತ ದರೋಡೆ ನಡೆಸುವ ಉದ್ದೇಶದಿಂದಲೇ ಕೊಲೆ ಮಾಡಿರುವ ಮಾಹಿತಿ ಇದ್ದರೂ, ನಿಖರ ಕಾರಣವೇನೆಂದು ತನಿಖೆಯ ಮೂಲಕವೇ ತಿಳಿಯಬೇಕಿದೆ.
ಫೆ.3ರಂದು ಮಂಗಳೂರಿನ ಹಂಪನಕಟ್ಟೆಯ ಮಂಗಳೂರು ಜ್ಯುವೆಲ್ಲರಿ ಎಂಬ ಹೆಸರಿನ ಶಾಪ್ನಲ್ಲಿ ಕೊಲೆ ಪ್ರಕರಣವೊಂದು ನಡೆದಿತ್ತು. ಈ ಜ್ಯುವೆಲ್ಲರಿಯ ಸಿಬ್ಬಂದಿ ಅತ್ತಾವರ ನಿವಾಸಿ ರಾಘವೇಂದ್ರ(50) ಇವರನ್ನು ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಜ್ಯುವೆಲ್ಲರಿ ಶಾಪ್ನ ಮಾಲೀಕ ಕೇಶವ ಆಚಾರ್ಯ ಅವರು ಮಧ್ಯಾಹ್ನ ಊಟಕ್ಕೆ ಹೋದ ಸಂದರ್ಭದಲ್ಲಿ ಈ ಕೊಲೆಯಾಗಿತ್ತು. ನಂತರ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
