Home » ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಹೋದ ಕೇರಳದ ಯುವಕ | ಅದಮ್ಯ ಉತ್ಸಾಹದ ಚಿಲುಮೆಯ ಯುವಕ ರಸ್ತೆ ಅಪಘಾತದಲ್ಲಿ ಸಾವು

ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಹೋದ ಕೇರಳದ ಯುವಕ | ಅದಮ್ಯ ಉತ್ಸಾಹದ ಚಿಲುಮೆಯ ಯುವಕ ರಸ್ತೆ ಅಪಘಾತದಲ್ಲಿ ಸಾವು

by Mallika
0 comments

ಹೊಸತನವನ್ನು ಅರಸಿ ಹೋಗುವ ಕಾಲ ಇದು. ಎಲ್ಲರಿಗೂ ಏನಾದರೂ ಒಂದು ಲೈಫ್ನಲ್ಲಿ ಹೊಸತನ ಮಾಡಬೇಕೆಂಬ ಹಂಬಲ ಖಂಡಿತ ಇರುತ್ತದೆ. ಕಾಲ ಬದಲಾದಂತೆ ಜನ ಬದಲಾಗುತ್ತಾರೆ. ಹಾಗಾಗಿ ಹೊಸ ಹೊಸ ಅನ್ವೇಷಣೆ, ಹೊಸ ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದು, ದೇಶ ಸುತ್ತುವುದು, ಜನ ಜಾಗೃತಿ ಮೂಡಿಸುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಜನ ಹಮ್ಮಿಕೊಳ್ಳುತ್ತಾರೆ.

ಈ ಸಾಲಿಗೆ ಕೇರಳದ ಯುವಕನೊಬ್ಬ ಸೇರಿದ್ದಾನೆ. ಹೌದು ಈತ ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಂಬಲ ಹೊಂದಿದ್ದ. ಆದರೆ ಈಗ ಅದೇ ಆತನ ಜೀವವನ್ನೇ ತೆಗೆಯಿತು. ಹೌದು ಕೇರಳದ ಅನಾಸ್ ಹಜಾಸ್ ಎಂಬ ಯುವಕ ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ಕೇಟಿಂಗ್ ಮೂಲಕ ಹೊರಟಿದ್ದ. ಯುವಕ ಹರ್ಯಾಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಕಳೆದ ಮೇ 29 ರಂದು ಕೇರಳದ 31 ವರ್ಷದ ಅನಾಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,700 ಕಿ. ಮೀ.ಯಾತ್ರೆಯನ್ನು ಸ್ಕೇಟಿಂಗ್ ಮೂಲಕ ಸಂಚರಿಸಲು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಮೇ 29 ರಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾಗಿದೆ. ಅಷ್ಟು ಮಾತ್ರವಲ್ಲ ಅನಾಸ್ ತನ್ನ ಪ್ರಯಾಣದ ಇಂಚಿಂಚು ಮಾಹಿತಿಯನ್ನು, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದರು.

ಆದರೆ ವಿಧಿ ಈತನ ಕೈ ಹಿಡಿಯಲಿಲ್ಲ. ಸ್ಕೇಟಿಂಗ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದ ಅನಾಸ್ ನ ಕೆಲಸ ಮಾತ್ರ ಪೂರ್ಣಗೊಳ್ಳಲಿಲ್ಲ. ಇನ್ನೇನು ಕಾಶ್ಮೀರಕ್ಕೆ 600ಕಿ. ಮೀ ಮಾತ್ರ ಬಾಕಿ ಇರುವಾಗಲೇ ಸಾವಿನ ರೂಪದಲ್ಲಿ ಬಂದ ಟ್ರಕ್ ಅನಾಸ್ ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅನಾಸ್ ನನ್ನು ಕೂಡಲೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಮರಣ ಹೊಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಸ್ಕೇಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಹಾಕುತ್ತಿದ್ದ ಅನಾಸ್, ತಾನು ದಿನಕ್ಕೆ 40 ರಿಂದ 50 ಕಿ.ಮೀ ಮಾತ್ರ ಸ್ಕೇಟಿಂಗ್ ಮಾಡುತ್ತಿದ್ದೇನೆ. ಇಲ್ಲಿಯವರೆಗೆ, ಎಲ್ಲವೂ ಸುರಕ್ಷಿತವಾಗಿದೆ. ಹಾಗೂ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದ. ಅನಾಸ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಮುಗಿಸಿದ ನಂತರ ತಿರುವನಂತಪುರಂನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳ ಹಿಂದೆ ಹೊಸ ಸ್ಕೇಟಿಂಗ್ ಬೋರ್ಡ್ ಕೊಂಡಿದ್ದರು. ಅಲ್ಲದೇ ಕಾಶ್ಮೀರ ಯಾತ್ರೆ ಬಳಿಕ ಇನ್ನು ಹಲವು ಯಾತ್ರೆಗಳ ಬಗ್ಗೆ ಆಸೆಯನ್ನು ಅನಾಸ್ ಹೊಂದಿದ್ದ ಎನ್ನಲಾಗಿದೆ. ಆದರೆ ವಿಧಿ ಮಾತ್ರ ಯಾವುದಕ್ಕೂ ಅವಕಾಶ ನೀಡಲಿಲ್ಲ.

You may also like

Leave a Comment