ಕಡಬ: ಕಳೆದ ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಎಂಬಲ್ಲಿ ಬೆಳ್ಳಂ ಬೆಳಗ್ಗೆ ಪಿಕಪ್ ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬ ವಿ.ಹಿಂ.ಪ, ಭಜರಂಗದಳ ಕಾರ್ಯಕರ್ತರು ಜಾನುವಾರು ಸಾಗಾಟಕ್ಕೆ ತಡೆವೊಡ್ಡಿ ಪೋಲಿಸರಿಗೆ ಒಪ್ಪಿಸಿದ್ದರು, ಈ ಘಟನೆಯ ಸಂದರ್ಭ ಜಾನುವಾರು ಸಾಗಾಟದಾರರೊಬ್ಬರ ಚಿನ್ನದ ಚೈನು ಹಾಗೂ ಹಣ ಕಾಣೆಯಾಗಿದೆ, ಇದನ್ನು ದಾಳಿ ನಡೆಸಿದ ಸಂಘಟನೆಯ ಕಾರ್ಯಕರ್ತರು ಕದ್ದಿದ್ದಾರೆ ಎಂದು ಅವರು ಕಾರಣಿಕ ಕ್ಷೇತ್ರ ಕೋಡಿಂಬಾಳ ಮಜ್ಜಾರು ಕ್ಷೇತ್ರಕ್ಕೆ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ನ.8ರಂದು ಕ್ಷೇತ್ರದಲ್ಲಿ ದೂರು ವಿಚಾರಣೆ ನಡೆದ ಘಟನೆ ನಡೆಯಿತು.
ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಏನೆಕಲ್ಲು ನಿವಾಸಿ ಸುಧೀರ್ ಮತ್ತು ಬೆಳಿಯಪ್ಪ ಎಂಬವರು ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪ ಹೊರಿಸಲಾದ ಕಡಬ ಪ್ರಖಂಡ ವಿ.ಹಿಂ.ಪ. ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಗೋ ರಕ್ಷಕ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಭಜರಂಗದಳದ ರಕ್ಷಿತ್ ಕೇಪು, ಸಂತೋಷ್ ದೊಳ, ತೀರ್ಥೇಶ್ ಮೀನಾಡಿ ಮೊದಲಾದವರು ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿದ್ದರು. ಕ್ಷೇತ್ರದ ಅಧ್ಯಕ್ಷರು ಆಗಿರುವ ಪ್ರಸಾದ ಕೆದಿಲಾಯ ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಯಿತು.
ಅಕ್ರಮ ದನ ಸಾಗಾಟ ಮಾಡಿದ ಸುಧೀರ್ ಅವರ ಚಿನ್ನದ ಚೈನು ಮತ್ತು ಹಣ ಕಳೆದು ಹೋಗಿದೆ, ಇದನ್ನು ದಾಳಿ ನಡೆಸಿದ ವಿ.ಹಿಂ.ಪ. ಭಜರಂಗದಳದ ಕಾರ್ಯಕರ್ತರು ಕದ್ದಿದ್ದಾರೆ ಎಂದು ಪ್ರಾರಂಭದಲ್ಲಿ ಸುಧೀರ್ ಅವರು ಆರೋಪ ಮಾಡಿದ್ದರು.
ಈ ಸಂದರ್ಭದಲ್ಲಿ ವಿ.ಹಿಂ.ಪ. ಭಜರಂಗದಳದ ಕಾರ್ಯಕರ್ತರು ತಮ್ಮ ಮಾತನ್ನು ಕ್ಷೇತ್ರದ ಸಾನಿಧ್ಯದಲ್ಲಿ ಹೇಳಿದ್ದು, ನೀವು ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡಿದ್ದರಿಂದ ನಾವು ತಡೆವೊಡ್ಡಿ ಪೋಲಿಸರಿಗೆ ಒಪ್ಪಿಸಿದ್ದು ನಿಜ, ಆದರೆ ನಿಮ್ಮ ಚಿನ್ನ, ಹಣ ನಾವು ಕದ್ದಿಲ್ಲ, ಅದನ್ನು ನೋಡಿಯೂ ಇಲ್ಲ, ಆ ಬಗ್ಗೆ ನೀವು ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ನಮ್ಮದೇನು ಅಭ್ಯಂತವಿಲ್ಲ, ಆದರೆ ನೀವು ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಹಿಂಸಾತ್ಮಾಕ ರೀತಿಯಲ್ಲಿ ಸಾಗಿಸುತ್ತಿದ್ದರೂ ಒಪ್ಪಿಕೊಳ್ಳದೆ, ತಂಗಿ ಮನೆಗೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದೀರಿ, ಇದು ಸತ್ಯವೆಂದು ದೈವದ ಸಾನಿಧ್ಯದ ಎದುರು ಹೇಳಿ ಎಂದಾಗ ಸುಧೀರ್ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ನಾವು ಕ್ರಿಶ್ಚಿಯನ್ ಓರ್ವರ ಮನೆಗೆ ಜಾನುವಾರು ಕೊಂಡೊಯ್ದುರುವುದಾಗಿ ಹೇಳಿ, ನನ್ನ ತಪ್ಪಾಗಿದೆ, ಇನ್ನು ಮುಂದೆ ಅಕ್ರಮ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುವುದಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದರು. ಬಳಿಕ ಚಿನ್ನ ಮತ್ತು ಹಣ ಕಾಣೆಯಾಗಿರುವ ಬಗ್ಗೆ ರಾಜನ್ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಜ್ಜಾರು ಕ್ಷೇತ್ರದ ಮುಂದಾಳುಗಳಾದ ಸುದರ್ಶನ ಗೌಡ, ರಾ.ಸ್ವ.ಸೇ.ಸಂ.ದ ಮಾಧವ ಕೋಲ್ಪೆ, ರಘುರಾಮ ನಾಕ್ ಕುಕ್ಕೆರೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
