Dakshina Kannada: ಶಾಲಾ ಕಾಲೇಜು ಬಳಿಯಲ್ಲಿ ತಂಬಾಕು,ಗುಟ್ಕಾ ಮುಂತಾದ ಮಾದಕ ವಸ್ತುಗಳ ಮಾರಾಟ ನಿಷೇಧವಿದ್ದರೂ ಅಂಗಡಿಯ ಮಾಲೀಕನೋರ್ವ ಮಾರಾಟ ನಡೆಸುತ್ತಿದ್ದರಿಂದ ಶಾಲಾ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆ ಹಾಳಾಗುತ್ತಿದೆ ಎಂದು ದೂರಿದ ಮೂರನೇ ತರಗತಿಯ ಶಾಲಾ ಬಾಲಕಿಯೊಬ್ಬಳು ಬರೆದ ಪತ್ರವೊಂದು ಮಾನ್ಯ ಮುಖ್ಯಮಂತ್ರಿಗಳಿಗೆ ತಲುಪಿದ್ದು,ಪತ್ರ ತಲುಪಿದ ಮರುಕ್ಷಣದಲ್ಲೇ ಅಂಗಡಿಗೆ ಪೊಲೀಸರು ದಾಳಿ ನಡೆಸಿದ ಘಟನೆಯೊಂದು ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಕೈಕಂಬದಿಂದ ವರದಿಯಾಗಿದೆ(Dakshina Kannada).
ಕೈಕಂಬ ಪಿಲಿಕಜೆ ನಿವಾಸಿ 3ನೇ ತರಗತಿ ವಿದ್ಯಾರ್ಥಿನಿ ಅಯೊರ ಪತ್ರ ಬರೆದ ಬಾಲಕಿಯಾಗಿದ್ದು, ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಬಂದಿದ್ದ ಧಾರ್ಮಿಕ ಕೇಂದ್ರಗಳ ಬಳಿಯ ಮಾದಕ ವಸ್ತು ಮಾರಾಟ ನಿಷೇಧದ ವರದಿಯನ್ನು ಓದಿ ತನ್ನೂರಿನ ಸಮಸ್ಯೆಯ ಬಗ್ಗೆಯೂ ಪತ್ರ ಬರೆದು ವಿಜಯವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗಕ್ಕೆ ಕಳುಹಿಸುವ ಮೂಲಕ ಗಮನಸೆಳೆದಿದ್ದಳು.
ಈಕೆ ಬರೆದ ಪತ್ರವನ್ನು ಪತ್ರಿಕೆಯ ಸಂಪಾದಕೀಯ ವಿಭಾಗವು ಮುಖ್ಯಮಂತ್ರಿಗಳ ಸಚಿವಾಲಯದ ಕುಂದುಕೊರತೆ ವಿಭಾಗದ ಅಧಿಕಾರಿ ವೈಷ್ಣವಿ ಅವರಿಗೆ ರವಾನಿಸಿತ್ತು. ಪತ್ರ ತಲುಪಿದ ಎರಡು ಗಂಟೆಗಳಲ್ಲಿ ಸೂಕ್ತ ಸ್ಪಂದನೆ ದೊರೆತಿದ್ದು, ಸಂಜೆ ಸುಮಾರು 07ರ ಹೊತ್ತಿಗೆ ಕಡಬ ಪೊಲೀಸರು ಅಂಗಡಿಗೆ ದಾಳಿ ನಡೆಸಿದ್ದರು.
ದಾಳಿಯ ವೇಳೆ ಅಂಗಡಿಯಲ್ಲಿ ಗುಟ್ಕಾ, ಸಿಗರೇಟ್ ಗಳು ಪತ್ತೆಯಾಗಿದ್ದು,ವಶಕ್ಕೆ ಪಡೆದ ಬಳಿಕ ತಂಬಾಕು ನಿಷೇಧ ಕಾಯಿದೆಯಡಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ. ಸದ್ಯ ಬಾಲಕಿ ಬರೆದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುಟ್ಟ ಪೋರಿಯ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
