Home » ಮರಳುಗಳ್ಳರಿಂದ ಸಿಸಿ ಕೆಮರಾ, ತಡೆಬೇಲಿ ಧ್ವಂಸ | ನಾಲ್ವರ ಬಂಧನ

ಮರಳುಗಳ್ಳರಿಂದ ಸಿಸಿ ಕೆಮರಾ, ತಡೆಬೇಲಿ ಧ್ವಂಸ | ನಾಲ್ವರ ಬಂಧನ

by Praveen Chennavara
0 comments

ಮಂಗಳೂರು : ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಾಕಿದ್ದ ಸಿಸಿ ಕೆಮರಾ ಮತ್ತು ತಂತಿ ತಡೆಬೇಲಿ ಧ್ವಂಸಗೈದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಡ್ಯಾರ್‌ ಸಾಯಿನಗರ ನಿವಾಸಿ ಸೂರಜ್‌, ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್‌, ತಲಪಾಡಿ ನಿವಾಸಿ ಅಖೀಲ್‌, ಸೋಮೇಶ್ವರ ಮೂಡಾ ನಿವಾಸಿ ಪ್ರಜ್ವಲ್‌ ಬಂಧಿತರು. ಅವರು ಕೃತ್ಯಕ್ಕೆ ಬಳಸಿದ್ದ ಟಿಪ್ಪರನ್ನು ವಶಕ್ಕೆ ಪಡೆಯಲಾಗಿದೆ.

ಸೋಮೇಶ್ವರ ದೇವಸ್ಥಾನ ಬಳಿಯಿಂದ ಮತ್ತು ಗಡಿಭಾಗ ಮೂಡಾ ಲೇಔಟ್‌ ಬಳಿಯ ಸಮುದ್ರದಿಂದ ನಿರಂತರವಾಗಿ ಮರಳು ಸಾಗಾಟ ಅಕ್ರಮವಾಗಿ ನಡೆಯುತ್ತಿತ್ತು. ಸ್ಥಳೀಯರ ವಿರೋಧದ ನಡುವೆ ಜಿಲ್ಲಾಧಿಕಾರಿ ಮಾರ್ಗದರ್ಶನ ದಲ್ಲಿ ಬೀಚ್‌ ಬದಿಯ ಸಮುದ್ರಕ್ಕೆ ಘನ ವಾಹನಗಳು ತೆರಳದಂತೆ ತಂತಿ ಬೇಲಿಯನ್ನು ಹಾಕಲಾಗಿತ್ತು ಮತ್ತು ಸಿಸಿ ಕೆಮರಾಗಳನ್ನು ಅಳವಡಿಸಲಾಗಿತ್ತು.

ಸಿಸಿ ಕೆಮರಾ ಅಳವಡಿಕೆಯಿಂದ ಮರಳು ಕಳ್ಳರಿಗೆ ತೊಂದರೆಯಾಗಿದ್ದು, ಮರಳು ಸಾಗಾಟದಾರರು ಯುವಕರನ್ನು ಮುಸುಕುಧಾರಿಗಳನ್ನಾಗಿ ಕಳುಹಿಸಿ ಕೃತ್ಯ ನಡೆಸಿದ್ದರು. ಘಟನೆಯಿಂದ ಸುಮಾರು 75 ಸಾವಿರ ನಷ್ಟ ಅಂದಾಜಿಸಲಾಗಿದೆ. ಒಂದು ಸಿಸಿ ಕೆಮರಾವನ್ನು ಟಿಪ್ಪರ್‌ ಮೂಲಕ ಧ್ವಂಸ ಮಾಡುವ ಚಿತ್ರಣ ವೈಫೈ ಮೂಲಕ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment