ಸಿದ್ದೇಶ ಎಂಬ ಸ್ನೇಹಿತನೋರ್ವ ತನ್ನ ದೂರದ ಊರಿನಲ್ಲಿರುವ ಸ್ನೇಹಿತ ಮನೀಷ್ ವರ್ಮಾ ವಿವಾಹವಾಗುತ್ತಿದ್ದಾನೆಂದು ಪ್ರೀತಿಯಿಂದ ಡಿಟಿಡಿಸಿ ಎಕ್ಸ್ಪ್ರೆಸ್ ಮೂಲಕ ಉಡುಗೊರೆಯಾಗಿ, ಸೂಟ್ ವೊಂದನ್ನು ಕಳಿಸಿದ್ದಾನೆ. ಆದರೆ ನಿಗದಿತ ವಿವಾಹದ ಸಮಯದ ಮೊದಲು ಈ ಸೂಟ್ ಆತನಿಗೆ ತಲುಪಲಿಲ್ಲ. ಇದರಿಂದ ಕಳುಹಿಸಿದ ಸ್ನೇಹಿತನಿಗೆ ಭಾರೀ ಮುಜುಗರವುಂಟಾಗಿತ್ತು. ಇದರಿಂದ ಕುಪಿತನಾದ ಸ್ನೇಹಿತ ಸಂಸ್ಥೆಯ ನಿರ್ಲಕ್ಷ್ಯತನದ ಕೇಸ್ ಹಾಕಿದ. ಪರಿಣಾಮ ಸಂಸ್ಥೆ ಈಗ ದುಬಾರಿ ಬೆಲೆ ತೆರಬೇಕಾಗಿ ಬಂದಿದೆ.
ಬೆಂಗಳೂರಿನ ಪ್ರಮೋದ್ ಲೇಔಟ್ ನ ಸಿದ್ದೇಶ ಎಂಬಾತ ಹೈದರಾಬಾದ್ ನಲ್ಲಿ ವಿವಾಹವಾಗುತ್ತಿದ್ದ ತನ್ನ ಆಪ್ತ ಸ್ನೇಹಿತನೋರ್ವನಿಗೆ ಡಿಟಿಡಿಸಿ ಮೂಲಕ ಸೂಟ್ ಉಡುಗೊರೆಯಾಗಿ ಕಳಿಸಿದ್ದ. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಅದು ತಲುಪದ
ಕಾರಣ ವರ ಸೂಟ್ ಗಾಗಿ ಕೊನೆಯ ಕ್ಷಣದವರೆಗೂ ಪರದಾಡಬೇಕಾಯಿತು.
ಸಂಸ್ಥೆಯ ನಿರ್ಲಕ್ಷ್ಯತನವನ್ನು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಿದ್ದ ಸಿದ್ದೇಶ ಅವರಿಗೆ ನ್ಯಾಯ ದೊರೆತಿದ್ದು, ನಿರ್ಲಕ್ಷ್ಯತನ ತೋರಿದ ಸಂಸ್ಥೆಗೆ ಹಾಗೂ ಉಳ್ಳಾಲ್ ನಲ್ಲಿರುವ ಅದರ ಶಾಖೆಗೆ ಸೂಟ್ ನ ಮೊತ್ತ 11,495 ರೂಪಾಯಿ, ಜೊತೆಗೆ ವಾರ್ಷಿಕ ಶೇ.10 ರಷ್ಟು ಬಡ್ಡಿ ಬುಕಿಂಗ್ ಚಾರ್ಜ್ 500 ರೂಪಾಯಿ, ದಾವೆ ವೆಚ್ಚ ಸೇರಿದಂತೆ, 10,000 ರೂಪಾಯಿ ಸೇರಿ ಒಟ್ಟು 25,000 ರೂಪಾಯಿಗಳನ್ನು ನೀಡಬೇಕೆಂದು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಿಟಿಡಿಸಿಗೆ ನಿರ್ದೇಶನ ನೀಡಿದೆ.
ಸಿದ್ದೇಶ (ದೂರುದಾರ) ಹಾಗೂ ಮನೀಷ್ ವರ್ಮಾ(ವರ) ಸಹೋದ್ಯೋಗಿಗಳಾಗಿದ್ದು, ಜೊತೆಗೆ ಉತ್ತಮ ಸ್ನೇಹಿತರು ಕೂಡಾ. ಹೈದರಾಬಾದ್ ನಲ್ಲಿ ಡಿ.1, 2019 ರಂದು ಹೈದರಾಬಾದ್ ನಲ್ಲಿ ವಿವಾಹವಾಗುತ್ತಿದ್ದ ವರ್ಮಾಗೆ ಸ್ನೇಹಿತ ಸಿದ್ದೇಶ 2019 ರ ನ.25 ರಂದು ಮದುವೆ ಸೂಟ್ ವೊಂದನ್ನು ಡಿಟಿಡಿಸಿ ಮೂಲಕ ಕೊರಿಯರ್ ಮಾಡಿದ್ದಾನೆ. ಆದರೆ ಅದು ನಿಗದಿತ ಸಮಯದೊಳಗೆ ತಲುಪಲಿಲ್ಲ. ಕೊನೆಗೆ ಕೊರಿಯರ್ ಮಾಡಲಾಗಿದ್ದ ಸೂಟ್ ಕಳೆದುಹೋಗಿದೆ, ಇದು ತಮ್ಮ ನಿಯಂತ್ರಣದಲ್ಲಿರಲಿಲ್ಲ. “ಭಗವಂತನ ಕ್ರಿಯೆ” ಎಂದು ಡಿಟಿಡಿಸಿ ಸಂಸ್ಥೆ ಕಾರಣ ನೀಡಿತ್ತು. ಅಷ್ಟು ಮಾತ್ರವಲ್ಲದೇ, ಕೊರಿಯರ್ ನಲ್ಲಿದ್ದ ಸರಕಿನ ಮೌಲ್ಯವನ್ನು ದೂರುದಾರ ಹೇಳಿಲ್ಲ, ರಿಸ್ಕ್ ಚಾರ್ಜ್ ನೀಡಿಲ್ಲ, ಹೆಚ್ಚುವರಿ ಪ್ರೀಮಿಯಂ ಪಾವತಿಸಿಲ್ಲ ಹಾಗಾಗಿ ನಾವು ಯಾವುದೇ ಪರಿಹಾರ ನೀಡಬೇಕಾಗಿಲ್ಲ ಎಂದು ಡಿಟಿಡಿಸಿ ಸಂಸ್ಥೆ ತನ್ನ ಉದ್ಧಟತನವನ್ನು ತೋರಿಸಿತ್ತು.
ಆದರೆ ಈ ಸಂಸ್ಥೆಯ ಈ ಯಾವುದೇ ವಾದವನ್ನೂ ಆಲಿಸದ ಆಯೋಗ ರಿಸ್ಕ್ ಸರ್ಚಾರ್ಜ್ ಸ್ವೀಕರಿಸದಂತೆ ನಿಮ್ಮನ್ನು ಯಾರೂ ತಡೆದಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ಸರಕನ್ನು ನಿಗದಿತ ಸಮಯಕ್ಕೆ ತಲುಪಿಸಲು ಸಾಧ್ಯಾವಗದೇ ಇರುವುದು ದೂರುದಾರರ ಘನತೆಗೆ ಹಾನಿ ಉಂಟುಮಾಡಿದ್ದು, ತೀವ್ರ ಮುಜುಗರ ಎದುರಿಸಿದ್ದಾರೆ ಎಂದು ಆಯೋಗ ಹೇಳಿದೆ.
