7th Pay Commission: ರಾಜ್ಯದಲ್ಲಿ ಚುನಾವಣೆಯ ಚಟುವಟಿಕೆಗಳು ನಡೆಯುತ್ತಿದ್ದುದ್ದರಿಂದ ಮತ್ತು ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಆಯೋಗಕ್ಕೆ ನಿಗಿದಿತ ಅವಧಿಯಲ್ಲಿ ವರದಿ ಸಿದ್ಧಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಹೆಚ್ಚಿನ ಕಾಲಾವಕಾಶವನ್ನು ಕೋರಿ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ರಾಜ್ಯದ ಎಲ್ಲೆಡೆ ಓಪಿಎಸ್ ಜಾರಿ ಮಾಡಲು ಬೇಡಿಕೆ ಇಡಲಾಗುತ್ತಿದೆ.
ಈಗಾಗಲೇ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು (7th Pay Commission) ಈ ಮೊದಲು ಸರ್ಕಾರಿ ನೌಕರರಿಂದ ಮತ್ತು ಸಾರ್ವಜನಿಕರಿಂದ ಪ್ರಶ್ನೋತ್ತರ ಮಾದರಿಯಲ್ಲಿ ಅಭಿಪ್ರಾಯ, ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದು, ಈಗ ಓಪಿಎಸ್ ಜಾರಿಗಾಗಿ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರದ ಎನ್ಪಿಎಸ್ ನೌಕರರ ಸಂಘದೊಂದಿಗೆ (NPS News) ವಿಶೇಷ ಸಭೆ ಆಯೋಜಿಸಿದೆ.
ಈ ಹಿನ್ನೆಲೆ ಆಯೋಗವು ಜೂನ್ 27ರ ರಂದು ವಿಶೇಷ ಸಭೆ ಕರೆದಿದ್ದು, ಬೆಳಗ್ಗೆ 11.30 ಕ್ಕೆ ಆಯೋಗದ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಅಗತ್ಯ ಎಲ್ಲ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕೆಂದು ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷರಿಗೆ ಆಯೋಗದ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪತ್ರ ಬರೆದಿದ್ದಾರೆ.
ಸಭೆಯಲ್ಲಿ ಸಂಘದ ಬೇಡಿಕೆಗಳ ಕುರಿತು ಚರ್ಚಿಸಲಾಗುತ್ತದೆ. ತಮ್ಮ ಬೇಡಿಕೆಗಳ ಕುರಿತು ಪಿಪಿಟಿಯೊಂದಿಗೆ ಬನ್ನಿ. ಪಿಪಿಟಿಯಲ್ಲಿ ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ ಇರಬೇಕು. ಮಾಹಿತಿಯು ವಸ್ತುನಿಷ್ಠ ಹಾಗು ನಿರ್ದಿಷ್ಟವಾಗಿರಬೇಕು ಹಾಗೂ ಹತ್ತು ಸ್ಲೈಡ್ಗಳಿಗೆ ಸೀಮಿತವಾಗಿರಬೇಕು. ಮಾಹಿತಿಯು ಸ್ಲೈಡ್ಗಳಲ್ಲಿ ಪುನರಾವರ್ತನೆಯಾಗಬಾರದು ಎಂದು ಸೂಚಿಸಲಾಗಿದೆ.
ಈಗಾಗಲೇ ಸರ್ಕಾರಿ ನೌಕರರ ಸಂಘದೊಂದಿಗೆ ಆಯೋಗವು ಇದೇ ರೀತಿಯಾಗಿ ಚರ್ಚೆ ನಡೆಸಿತ್ತು. ಈ ಸಭೆಯಲ್ಲಿ ಮುಖ್ಯವಾಗಿ ಓಪಿಎಸ್ ಮತ್ತು ಎನ್ಪಿಎಸ್ ಕುರಿತ ವಿಷಯಗಳು ಚರ್ಚೆಗೆ ಬರಲಿದೆ.
ಈ ಮೊದಲೇ ಎನ್ಪಿಎಸ್ ನೌಕರರ ಸಂಘ ಓಪಿಎಸ್ ಜಾರಿಗೆ ಸಬಂಧಿಸಿದಂತೆ ಎಲ್ಲ ಮಾಹಿತಿಯನ್ನೂ ಆಯೋಗಕ್ಕೆ ಸಲ್ಲಿಸಿದೆ. ಎನ್ಪಿಎಸ್ ರದ್ದುಪಡಿಸಿ, ಓಪಿಎಸ್ ಜಾರಿಗೆ ಶಿಫಾರಸು ಮಾಡಬೇಕೆಂದು ಮತ್ತೊಮ್ಮೆ ಎಲ್ಲ ಮಾಹಿತಿಗಳೊಂದಿಗೆ ಮನವಿ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಾಂತರಾಮ ತಿಳಿಸಿದ್ದಾರೆ.
