Kundapur: ಕುಂದಾಪುರ: ಕುಂದಾಪುರ ತಾಲೂಕಿನ (Kundapur) Kundapurಪ್ರಸಿದ್ದ ಕ್ಷೇತ್ರ ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ, ಯಡಮೊಗೆ ಗ್ರಾಮದ ತೊಪ್ಪುಮನೆ ನಿವಾಸಿ ಶೇಷಾದ್ರಿ ಐತಾಳ ಅವರು ಮನೆ ಸಮೀಪದ ಕುಬ್ಜಾ ನದಿಗೆ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕೃಷಿಕರೂ ಆಗಿದ್ದ ಶೇಷಾದ್ರಿ ಐತಾಳ್ ಅವರಿಗೆ ಕುಬ್ಜಾ ನದಿಯ ಎರಡೂ ತಟಗಳಲ್ಲಿ ತೋಟಗಳಿದ್ದು,ನದಿಯನ್ನು ದಾಟಲು ಅವರೇ ನಿರ್ಮಿಸಿದ ಕಾಲು ಸಂಕವಿದೆ. ಎಂದಿನಂತೆ ಸಂಜೆ ನದಿಯ ಮತ್ತೊಂದು ತಟದಲ್ಲಿರುವ ತೋಟಕ್ಕೆಂದು ಮನೆಯಿಂದ ತೆರಳಿದ್ದ ಅವರು ರಾತ್ರಿಯಾದರೂ ಮರಳಿ ಬರಲಿಲ್ಲ. ಮನೆಮಂದಿ ಮತ್ತು ಅಕ್ಕಪಕ್ಕದ ಮನೆಯವರು ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಸುಳಿವು ಪತ್ತೆಯಾಗಿರಲಿಲ್ಲ. ನೀರಿನ ಹರಿವು ಅಧಿಕವಾಗಿದ್ದ ಕಾರಣ ನದಿಯಲ್ಲಿ ಹುಡುಕಲು ಅವರಿಂದ ಸಾಧ್ಯವಾಗಿರಲಿಲ್ಲ.
ಬೆಳಿಗ್ಗೆ ನದಿಗೆ ಬಿದ್ದ ಜಾಗದಿಂದ ಸುಮಾರು 100 ಮೀಟರ್ ದೂರದಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.
ನದಿಯ ಮೇಲ್ಬಾಗದಲ್ಲಿ ಸುಸಜ್ಜಿತ ಕಾಲುಸಂಕ ಇದೆಯಾದರೂ ಅದಕ್ಕೆ ಸಂಪರ್ಕಕಲ್ಪಿಸುವಲ್ಲಿ ಅಡಿಕೆ ಮರದಿಂದ ನಿರ್ಮಿಸಿದ ಕಾಲುಸಂಕವಿದೆ. ಐತಾಳರು ಮರದ ಸಂಕವನ್ನು ದಾಟುವ ವೇಳೆ ಕಾಲುಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
