BJP State president: ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election)ಹೀನಾಯವಾಗಿ ಸೋಲುಂಡ ಬಳಿಕ ರಾಜ್ಯದಲ್ಲಿ ಬಿಜೆಪಿಯ(BJP) ನಸೀಬು ಕೊಂಚವೂ ಸರಿಯಿಲ್ಲದಾಗಿದೆ. ಸಮರ್ಥ ನಾಯಕನ ನಾಯಕತ್ವ ಇಲ್ಲದೆ ಹಳಿ ತಪ್ಪಿದ ರೈಲಿನಂತಾಗಿದೆ ರಾಜ್ಯದಲ್ಲಿನ ರಾಷ್ಟ್ರೀಯ ಪಕ್ಷದ ಪರಿಸ್ಥಿತಿ. ಆದರೆ ಈ ನಡುವೆ ಬೆಂಗಳೂರಿನ ಶಾಸಕರೊಬ್ಬರಿಗೆ ಬಿಜೆಪಿ ರಾಜ್ಯಾಧ್ಯಕ್ಷ(BJP State president)ಪಟ್ಟ ಬಹುತೇಕ ಫಿಕ್ಸ್ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಾಗಿದ್ರೆ ಯಾರವುರು? ಅವರಿಗೇ ಅಧ್ಯಕ್ಷ ಸ್ಥಾನ ನೀಡಲು ಕಾರಣವೇನು?
ವಿಪಕ್ಷ ನಾಯಕನಆಯ್ಕೆ ಮಾಡದೆ, ರಾಜ್ಯಾಧ್ಯಕ್ಷರ ಅವಧಿ ಮುಗಿದರೂ ಹೊಸ ಅಧ್ಯಕ್ಷರನ್ನು ನೇಮಿಸದೆ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಹೈಕಮಾಂಡ್ ಅಂತೂ ನಾಯಕರನ್ನೆಲ್ಲ ಅತಂತ್ರ ಮಾಡಿಬಿಟ್ಟಿದೆ. ಕೂರು ಎಂದರೆ ಕೂರಬೇಕು, ನಿಲ್ಲು ಎಂದರೆ ನಿಲ್ಲಬೇಕು, ಕಾಯಿರಿ ಎಂದರೆ ಕಾಯಲೇ ಬೇಕೆನ್ನುವಂತೆ ಮಾಡಿಬಿಟ್ಟಿದ್ದಾರೆ. ‘ಅರೇ.. ಪಕ್ಷ ನಿಮಗಾಯ್ತು ಸ್ವಾಮಿ. ನಮಗೆ ಕಾನೂನು ಪ್ರಕಾರ ವಿಪಕ್ಷ ನಾಯಕನನ್ನು ಕೊಡಿ, ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುವ ನಾಯಕನನ್ನು ವಿಧಾನಸಭೆಗೆ ಕಳಿಸಿ’ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸದ್ಯ ಇದರಿಂದೆಲ್ಲಾ ಎಚ್ಚೆತ್ತಿರುವ ಬಿಜೆಪಿ ಇದೀಗ ಹೊಸ ರಾಜ್ಯಾಧ್ಯಕ್ಷನ ಹುಡಕಾಟದಲ್ಲಿ ತೊಡಗಿದ್ದು ಪಕ್ಷಕ್ಕೆ ಬದ್ಧರಾಗಿರುವ ಮತ್ತು ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳದ ನಾಯಕನ ಆಯ್ಕೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಈ ಶಾಸಕರಿಗೆ ಈ ಪಟ್ಟ ಪಕ್ಕಾನಾ? ಎಂಬ ಅನುಮಾನ ಮೂಡಿದೆ.

ಹೌದು, ರಾಜ್ಯಾಧ್ಯಕ್ಷರ ವಿಚಾರವಾಗಿ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್(Dr. Ashwath narayan) ಹೆಸರು ಮುನ್ನಲೆಗೆ ಬಂದಿದೆ. ಸಂಘದ ಮುಖಂಡರು, ಬಿಜೆಪಿಯ ಪ್ರಮುಖ ನಾಯಕರು, ಕೆಲ ಪ್ರಕೋಷ್ಟಗಳ ನಾಯಕರೊಂದಿಗೆ ಅಶ್ವತ್ಥ ನಾರಾಯಣ ನೇಮಕದ ಬಗ್ಗೆ ಅಭಿಪ್ರಾಯ ಕೇಳಿದೆ ಎನ್ನಲಾಗಿದೆ. ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಡಿಕೆ ಬ್ರದರ್ಸ್ ಹಾಗೂ ಕಾಂಗ್ರೆಸ್ ವಿರುದ್ಧ ನೇರಾ ನೇರಾ ವಾಗ್ದಾಳಿ ನಡೆಸುವ ಲೀಡರ್ ಕೂಡ ಇವರಾಗಿದ್ದಾರೆ.
ಇಷ್ಟೇ ಅಲ್ಲದೆ ಅಶ್ವಥ್ ನಾರಾಯಣ್ ವಿರುದ್ಧ ಹೊಂದಾಣಿಕೆ ರಾಜಕಾರಣದ ಆರೋಪವಿಲ್ಲ ಎಂಬ ಪ್ಲಸ್ ಪಾಯಿಂಟ್ ಕೂಡ ಇಲ್ಲಿ ಮುಖ್ಯವಾಗಿದೆ. ಜೊತೆಗೆ ಅಶ್ವಥ್ ನಾರಾಯಣ್ ಅವರ ವಿಧಾನಸಭಾ ಕ್ಷೇತ್ರ ಬೆಂಗಳೂರಿನಲ್ಲೆ ಇರುವುದು. ಈ ಎಲ್ಲಾ ಕಾರಣಕ್ಕಾಗಿ ಅಶ್ವಥ್ ನಾರಾಯಣ ನೇಮಕದ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಕುತೂಹಲ, ಅನುಮಾನ ನಿಜವಾಗುತ್ತದೆಯಾ ಎಂದು ಕಾದುನೋಡಬೇಕಿದೆ.
