Accident: ಶಾಲಾ ಬಸ್ಸು ಹಾಗೂ ಆಟೋ ರಿಕ್ಷಾ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ.
ಬಸ್ಸು ಪೆರ್ಲ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ್ದಾಗಿದೆ. ವಿದ್ಯಾರ್ಥಿಗಳನ್ನು ಅವರವರ ಮನೆಗೆ ಬಿಟ್ಟು ಬಸ್ಸು ವಾಪಸ್ಸು ಪೆರ್ಲಕ್ಕೆ ಬರುವಾಗ ಪಳ್ಳತ್ತಡ್ಕದ ಸಮೀಪ ಗುಳಿಗ ಬನದ ಸಮೀಪದ ತಿರುವಿನಲ್ಲಿ ನಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಭೀಕರ ಅಪಘಾತ ಇಂದು (ಸೆ.25) 5 ಗಂಟೆ ಸುಮಾರಿಗೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಮೂವರು ಸಹೋದರಿಯರು, ಬೇರೊಂದು ಕುಟುಂಬದ ಸದಸ್ಯೆ ಮಹಿಳೆ ಆಟೋ ರಿಕ್ಷಾದಲ್ಲಿ ಸಂಬಂಧಿಕರ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಭೀಕರ ಅಪಘಾತ(Accident) ನಡೆದಿದೆ. ರಿಕ್ಷಾದಲ್ಲಿ ಸಂಚರಿಸುತ್ತಿದ್ದ ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದವರನ್ನು ಆಸ್ಪತ್ರೆಗೆ ಸಾಗಿಸುವಾಗ, ಮತ್ತು ಆಸ್ಪತ್ರೆಗೆ ದಾಖಲು ಮಾಡಿದ ಬಳಿಕ ಸಾವಿಗೀಡಾಗಿದ್ದಾರೆಂದು ವರದಿಯಾಗಿದೆ.
ಇದನ್ನು ಓದಿ: ಮಸೀದಿಯ ಬಳಿ ಜೈಶ್ರೀರಾಮ್ ಘೋಷಣೆ ಕೂಗಿದ ಇಬ್ಬರ ಬಂಧನ
