DV Sadananda Gowda: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadananda Gowda) ಅವರು ಇದೀಗ ಕಾಂಗ್ರೆಸ್ ಪಕ್ಷದ ಕೆಲವು ಗೌಪ್ಯ ನಡೆಗಳ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೆ ಮಾಧ್ಯಮ ಮೂಲಕ ಕಿಡಿಕಾರಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಗೆ ಭೇಟಿ ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ ಅವರು, ಭ್ರಷ್ಟಾಚಾರ, ಲೂಟಿ ಕಾಂಗ್ರೆಸ್ಸಿನ ರಕ್ತದಲ್ಲಿದೆ. ಕಾಂಗ್ರೆಸ್, ರಾಜ್ಯದ ಅಭಿವೃದ್ಧಿಗೆ ಅನ್ಯಾಯ ಮಾಡುತ್ತಿದೆ. ಅಂಬಿಕಾಪತಿಗೆ ₹42 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮೂಲತಃ ಭ್ರಷ್ಟಾಚಾರ ಮಾಡೋದು ಕಾಂಗ್ರೆಸ್ ರಕ್ತದಲ್ಲೇ ಇದೆ. ಹೋಟೆಲ್ನಲ್ಲಿ ಆಹಾರಕ್ಕೆ ರೇಟ್ ಲೀಸ್ಟ್ ಹಾಕುತ್ತಾರೆ. ಆದರೆ ಕಾಂಗ್ರೆಸ್ನಲ್ಲಿ ಚಟ್ನಿ ಸಾಂಬಾರ್ಗೂ ರೇಟ್ ಲಿಸ್ಟ್ ಹಾಕಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ದಾಳಿಯಾಗಿದೆ. ಅಂಬಿಕಾಪತಿ ಮನೆಗೆ ಕೆಂಪಣ್ಣ ಯಾಕೆ ನಿನ್ನೆ ಹೋಗಿದ್ದರು? ಮದ್ದು ಅರೆಯುವ ಸಲುವಾಗಿ ಕೆಂಪಣ್ಣ ಹೋಗಿದ್ದಾರಾ? ಕಾಂಗ್ರೆಸ್ ಸರ್ಕಾರವನ್ನು ರಕ್ಷಿಸಲು ಹೋಗಿದ್ದರಾ?ಎಂದು ಕಿಡಿ ಕಾರಿದ್ದಾರೆ.
ನಿನ್ನೆ ಐಟಿ ದಾಳಿ ವೇಳೆ ಸಿಕ್ಕ ಹಣ ಬಿಜೆಪಿ ಗುತ್ತಿಗೆದಾರರದ್ದು ಎಂದಾದರೆ ತನಿಖೆ ಮಾಡಿಸಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ. ಬಿಜೆಪಿ ಹಣ ಎನ್ನುವ ಶಿವಕುಮಾರ್ ಅವರಿಗೆ ನಾಚಿಕೆ ಆಗಬೇಕು. ಉಪಮುಖ್ಯಮಂತ್ರಿಗಳ ಬಾಯಲ್ಲಿ ಬರುವ ಮಾತು ಇದಲ್ಲ ಎಂದು ಖಡಕ್ ಆಗಿ ಹೇಳಿದರು.
ಅದಲ್ಲದೆ ಸೋಮವಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರು ಸಭೆ ನಡೆಸಿದ್ದಾರೆ. ಐಟಿ ದಾಳಿ ವೇಳೆ ಅಪಾರ ಪ್ರಮಾಣದ ನಗದು ಸಿಕ್ಕ ಬಳಿಕ ಸಭೆ ಮಾಡಿದ್ದರ ಉದ್ದೇಶ ಏನು ಎಂದು ಸದಾನಂದಗೌಡರು ಬಹಿರಂಗವಾಗಿ ಪ್ರಶ್ನಿಸಿದರು. ಸದ್ಯ ಸದಾನಂದ ಗೌಡ ರ ಪ್ರಶ್ನೆಗೆ ಮುಖ್ಯಮಂತ್ರಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಯಜಮಾನಿಯರೇ, 2ನೇ ಕಂತಿನ ‘ಗೃಹಲಕ್ಷ್ಮೀ’ ಹಣ ಈ ದಿನ ಖಾತೆಗೆ ಜಮಾ ಆಗಲಿದೆ
