Mangalore: ಈಗಾಗಲೇ ಕೇರಳದ ಎರ್ನಾಕುಲಂ ಜೆಹೋವಾ ವಿಟ್ನೆಸ್ ಕ್ರೈಸ್ತ ಸಮಾವೇಶದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಕೃತ್ಯ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿಭಾಗ ಹಾಗೂ ಮಂಗಳೂರು (Mangalore) ನಗರದಲ್ಲಿಅಲರ್ಟ್ (High Alert Across Dakshina Kannada) ಆಗಿರುವಂತೆ ಸೂಚನೆ ನೀಡಲಾಗಿದೆ.
ಕೇರಳದಿಂದ ಕರ್ನಾಟಕ ಪ್ರವೇಶಿಸುವ ಗಡಿಭಾಗಗಳಾದ ತಲಪಾಡಿ, ದೇವಿಪುರ, ಕೊಣಾಜೆ, ನೆಕ್ಕಿಲಪದವು, ನಂದಪುರ, ಮುದಾಂಗರ, ನಾರ್ಯ ಸೇರಿದಂತೆ ನಾನಾ ಕಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನ, ವ್ಯಕಿಗಳ ಮಾಹಿತಿ, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಇನ್ನು ಮಂಗಳೂರು ನಗರ ವ್ಯಾಪ್ತಿಯ ಪ್ರಾರ್ಥನಾ ಮಂದಿರದ ಮೇಲೂ ನಿಗಾಯಿರಿಸಲಾಗಿದ್ದು, ಬಾಂಬ್ ಪತ್ತೆದಳದಿಂದ ಬಸ್ ತಂಗುದಾಣ, ಮಾಲ್ ಸೇರಿದಂತೆ ಹಲವೆಡೆ ತಪಾಸಣೆ ನಡೆಸಲಾಗುತ್ತಿದೆ. ಅದಲ್ಲದೆ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ತಂಗುದಾಣ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ತಪಾಸಣೆ ಬಿಗುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನದಿ ಪಾತ್ರದಲ್ಲೂ ಪೆಟ್ರೋಲಿಂಗ್ ನಡೆಸಲಾಗುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಬೋಟುಗಳು ಕಂಡು ಬಂದರೆ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಸಶಸ್ತ್ರ ಮೀಸಲು ಪಡೆ ತುಕಡಿ ಸನ್ನದ್ಧವಾಗಿದ್ದು, ಪೆಟ್ರೋಲಿಂಗ್ ನಡೆಸಿದೆ. ರಾತ್ರಿಯೂ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Traffic Rules: ಸಂಚಾರಿ ನಿಯಮ ಉಲ್ಲಂಘನೆ- ದಂಡ ವಸೂಲಾತಿಗೆ ರಾಜ್ಯಾದ್ಯಂತ ಹೊಸ ರೂಲ್ಸ್ !!
