ಸಿಕ್ಕಿಂ ಮೂಲದ ಯುವಕನೊಬ್ಬ ಮೇಘಾಲಯದ ಬಾಲಕಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಎಂಬಲ್ಲಿಗೆ ಬಂದು ವಾಸ ನಡೆಸುತ್ತಿದ್ದರು. ಅತ್ತ ಬಾಲಕಿಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಜೋಡಿ ಕಡಬ ತಾಲೂಕಿನಲ್ಲಿರುವುದನ್ನು ಪತ್ತೆ ಹಚ್ಚಿದ ಮೇಘಾಲಯ ಪೊಲೀಸರು ಕಡಬಕ್ಕೆ ಆಗಮಿಸಿ, ಕಡಬ ಪೊಲೀಸರ ಸಹಕಾರದಿಂದ ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ: ಮೇಘಾಲಯ ಮೂಲದ ಯುವತಿ ಸಿಕ್ಕಿಂ ನಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದ ಸಂದರ್ಭ ಅದೇ ಊರಿನ ಸುಶೀಲ್ ಎಂಬಾತನ ಪರಿಚಯವಾಗಿದ್ದು, ಪ್ರೇಮಕ್ಕೆ ತಿರುಗಿದೆ ಎನ್ನಲಾಗಿದೆ. ವಿಷಯ ಮನೆಯಲ್ಲಿ ಗೊತ್ತಾದರೆ ಅಪಾಯ ಎಂದು ಅರಿತ ಜೋಡಿ ಕಡಬ ತಾಲೂಕಿನ ಕುಂತೂರಿಗೆ ಆಗಮಿಸಿದೆ. ಯುವಕ ಆಲಂಕಾರು ಎಂಬಲ್ಲಿ ಫಾಸ್ಟ್ ಫುಡ್ ಮಾಡಿಕೊಂಡಿದ್ದು ಇಬ್ಬರೂ ಜೀವನ ಸಾಗಿಸುತ್ತಿದ್ದರು.ಅತ್ತ ಅಪಹರಣ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ನೆಟ್ ವರ್ಕ್ ಮೂಲಕ ಜೋಡಿಯು ಕಡಬದಲ್ಲಿರುವುದನ್ನು ಪತ್ತೆ ಹಚ್ಚಿದ ಮೇಘಾಲಯ ಪೊಲೀಸರು ಕೂಡಲೇ ಕಡಬಕ್ಕೆ ಆಗಮಿಸಿದ್ದು, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಕುಂತೂರಿನ ಮನೆಯಲ್ಲಿ ಜೋಡಿಯನ್ನು ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿ, ಯುವಕನನ್ನು ವಶಕ್ಕೆ ಪಡೆದು ರಾಜ್ಯಕ್ಕೇ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
