Home » ‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ..

‘ಪಬ್ ಜಿ’ ಗಾಗಿ ಅಜ್ಜ-ಅಜ್ಜಿಯನ್ನೇ ಜೈಲಿಗೆ ಕಳುಹಿಸಲು ಮುಂದಾದ ಮೊಮ್ಮಗ, ಅಷ್ಟಕ್ಕೂ ಆತನ ಮಾಸ್ಟರ್ ಪ್ಲಾನ್ ಏನೆಂದು ನೀವೇ ನೋಡಿ..

0 comments

ಆನ್ಲೈನ್ ಗೇಮ್ ಆದ ‘ಪಬ್ ಜಿ’ ಅದೆಷ್ಟೋ ಅಮಾಯಕರ ಪ್ರಾಣವನ್ನೇ ಹಿಂಡಿದೆ. ಈ ಆಟದ ಹುಚ್ಚಿಗೆ ಪುಟ್ಟ ಮಕ್ಕಳಿಂದ ಹಿಡಿದು ಯುವಕರು ವ್ಯಸನಿಯಾಗಿದ್ದಾರೆ. ಪೋಷಕರು ಮಕ್ಕಳಿಗೆ ಪಬ್ ಜಿ ಆಡದಂತೆ ಹೇಳಿದಾಗ ಅವರನ್ನೇ ಕೊಂದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಇನ್ನೊಂದು ಘಟನೆ ಸೇರಿದೆ.

ಹೌದು. ಇಂತಹುದೊಂದು ಘಟನೆ ಉತ್ತರ ಪ್ರದೇಶದ ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಹರ್‌ಖೌಲಿ ನಿವಾಸಿಯಾದ ಹದಿನೆಂಟು ವರ್ಷದ ಬಾಲಕ ಪಬ್ ಜಿ ಗಾಗಿ ತಾನು ಎಸಗಿದ ಕೃತ್ಯ ಬೆಚ್ಚಿ ಬೀಳಿಸುವಂತಿದೆ. ತನ್ನ ಆಟಕ್ಕೆ ಅಡ್ಡಿ ಪಡಿಸಿದ ಅಜ್ಜ ಅಜ್ಜಿಯನ್ನೇ ಜೈಲಿಗೆ ಕಳುಹಿಸುವಂತಹ ಪ್ಲಾನ್ ಮಾಡಿದ್ದಾನೆ. ಆದರೆ, ಈತನ ಮೋಸದ ಆಟಕ್ಕೆ ಈತನೇ ಬಲಿಯಾಗಿದ್ದಾನೆ.

ಘಟನೆಯ ವಿವರ :
ಆರೋಪಿಯ ಅಜ್ಜ ಅಜ್ಜಿ ಆನ್‌ಲೈನ್ ಗೇಮ್ ಆಡದಂತೆ ಈತನನ್ನು ನಿಯಂತ್ರಣದಲ್ಲಿ ಇರಿಸಿದ್ದರಂತೆ. ಇದರಿಂದ ಕುಪಿತಗೊಂಡ ಈತ ಅಜ್ಜನ ವಿರುದ್ಧ ಸಂಚು ರೂಪಿಸಿದ್ದಾನೆ. ತನ್ನ ಅಜ್ಜನ ಬಳಿ ಖಾಸಗಿ ಟ್ಯೂಷನ್‌ಗೆ ಬಂದ ಆರು ವರ್ಷದ ವಿದ್ಯಾರ್ಥಿ ಸಂಸ್ಕರ್‌ ಎಂಬುವನನ್ನು ಕೊಂದು, ತನಗೆ ಬುದ್ದಿ ಹೇಳುತ್ತಿದ್ದ ಅಜ್ಜ ಅಜ್ಜಿಯನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದಾನೆ.

ಬುಧವಾರ ಟ್ಯೂಷನ್‌ಗೆ ತೆರಳಿದ್ದ ಆರು ವರ್ಷದ ಸಂಸ್ಕರ್​ನನ್ನು ಕರೆದುಕೊಂಡು ಹೋಗಲು ತಂದೆ ಬಂದಾಗ, ಸಂಸ್ಕರ್‌ ಟ್ಯೂಷನ್‌ಗೆ ಬಂದಿಲ್ಲ ಎಂದು ಈತ ತಿಳಿಸಿದ್ದಾನೆ. ಆದರೆ, ಈತನ ಪ್ಲಾನ್​ ಫೈಲ್​ ಆಗಿದೆ. ಯಾಕೆಂದರೆ ನಾಪತ್ತೆಯಾದವನ ಪೋಷಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದಾಗ, ಭಯಭೀತನಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಮತ್ತು ಶವವನ್ನು ಶೌಚಾಲಯದಲ್ಲಿ ಅಡಗಿಸಿಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ಹನ್ನೆರಡು ಗಂಟೆಗಳ ಸುದೀರ್ಘ ತನಿಖೆಯ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ನನ್ನ ಅಜ್ಜ ಅಜ್ಜಿ ಪಬ್ ಜಿ ಆಟವಾಡಬೇಡ ಎಂದು ನನ್ನನ್ನು ಗದರಿಸುತ್ತಿದ್ದರು. ಇದರಿಂದ ಕುಪಿತಗೊಂಡು ಸಂಸ್ಕರ್​ನನ್ನು ಕೊಂದು ಆ ಇಬ್ಬರನ್ನೂ ಜೈಲಿಗೆ ಕಳುಹಿಸಲು ಯೋಜಿಸಿದ್ದೆ. ಅದರಂತೆ ಬುಧವಾರ ಸಂಸ್ಕರ್ ಟ್ಯೂಷನ್‌ಗೆ ಬಂದಾಗ ನಾನು ಅವನ ಬಾಯಿಯನ್ನು ಫೆವಿಕ್ವಿಕ್‌ನಿಂದ ಅಂಟಿಸಿ ವಾಶ್‌ರೂಮ್‌ನಲ್ಲಿ ಕತ್ತು ಹಿಸುಕಿ ಸಾಯಿಸಿದೆ ಎಂದು ತಿಳಿಸಿದ್ದಾನೆ.

ಘಟನೆ ಸಂಬಂಧ ಎಸ್ಪಿ ಸಂಕಲ್ಪ್ ಶರ್ಮಾ ಮಾತನಾಡಿ, ಅರ್ಜುನ್ ಶರ್ಮಾ (18) ಪಬ್ಜಿ ವ್ಯಸನಿಯಾಗಿದ್ದು, ತನ್ನ ಅಜ್ಜ ನರಸಿಂಗ್ ಶರ್ಮಾ (60) ರ ಬಳಿ ಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಆ ಕುಟುಂಬದಿಂದ 5 ಲಕ್ಷ ರೂ. ಕೇಳಿದ್ದಾನೆ. ಈ ಪ್ರಕರಣದಲ್ಲಿ ತನ್ನ ಅಜ್ಜ ಅಜ್ಜಿಯರು ಸಿಲುಕಿ ಜೈಲು ಪಾಲಾಗುತ್ತಾರೆ ಎಂಬುವುದು ಆರೋಪಿಯ ಕುತಂತ್ರವಾಗಿತ್ತು ಎಂದು ತಿಳಿಸಿದ್ದಾರೆ.

You may also like

Leave a Comment