ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ(Gruhalakshmi)ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಈ ದಿನದಿಂದಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi hebbalkar)ತಿಳಿಸಿದ್ದಾರೆ.
ಹೌದು, ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯ ಸರ್ಕಾರದ(State Government)ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜುಲೈ 19ರಿಂದ ಆರಂಭವಾಗಲಿದೆ. ಅಂದೇ ಆ್ಯಪ್ಗೆ ಚಾಲನೆ ನೀಡಲಾಗುವುದು, ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬಿಬಿಎಂಪಿ ವಾರ್ಡ್ ಕಚೇರಿ ಕೇಂದ್ರಗಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿರುವುದಿಲ್ಲ. ಒಂದು ವೇಳೆ ನಿಗದಿತ ದಿನಾಂಕ, ಸಮಯಕ್ಕೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದೆ ಯಾವುದೇ ದಿನಾಂಕ ಅಥವಾ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಯೋಜನೆಯನ್ನು ರಾಷ್ಟ್ರೀಯ ನಾಯಕರಿಂದ(National leaders)ಚಾಲನೆ ನೀಡಲಾಗುವುದು. ರಾಷ್ಟ್ರೀಯ ನಾಯಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ನಾಯಕರು ಒಪ್ಪಿಕೊಂಡರೆ 17ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಉದ್ಘಾಟನೆ ಮಾಡಲಾಗುವುದು. ಸೋನಿಯಾ ಗಾಂಧಿ(Sonia gandhi) ಅವರಿಗೆ ಅಹ್ವಾನ ನೀಡಲಾಗಿದೆ. ರಾಷ್ಟ್ರೀಯ ನಾಯಕರ ನಿರ್ಧಾರ ಇಂದು ಮಧ್ಯಾಹ್ನ ಖಚಿತವಾಗುತ್ತದೆ. ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಸಮಯ ನೀಡಲಿಲ್ಲ ಅಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜುಲೈ 19ರಂದು ಚಾಲನೆ ನೀಡಲಾಗುವುದು ಎಂದರು. ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ ನಿನ್ನೆ ದಿನ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹೇಮಲತಾ ನಾಯಕ್ (Hemalatha Nayak) ಅವರು ಗೃಹಲಕ್ಷ್ಮಿ ಯೋಜನೆ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆಗಸ್ಟ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಮಾಡಲಾಗುತ್ತದೆ ಅಂತ ಭರವಸೆ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ಹಣ ಬೇಕೆಂದು ಅಂದಾಜಿಸಲಾಗಿದೆ. 2023-24ರ ಬಜೆಟ್ನಲ್ಲಿ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು 17,500 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ವಿವರಿಸಿದರು.
ಆಗಸ್ಟ್ ನಲ್ಲಿ ಖಾತೆಗೆ ಹಣ:
ಸದನದಲ್ಲಿ ಆಗಸ್ಟ್ 16 ಅಥವಾ 17 ರಂದು ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಹಾಕ್ತೀವಿ. ಮನೆ ಯಜಮಾನಿಗೆ ನಾವು 2 ಸಾವಿರ ರೂ. ಕೊಡ್ತಿದ್ದೇವೆ. ಕುಟುಂಬದ ಯಜಮಾನಿಗೆ ಯೋಜನೆ ಲಾಭ ಹೋಗುತ್ತೆ. ಯಾರ ಮನೆಯಲ್ಲೂ ಜಗಳ ತರಲು ಈ ಯೋಜನೆ ಕಾಂಗ್ರೆಸ್(Congress)ಮಾಡಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿದ ಮಹಿಳೆಯರಿಗೆ ಅನುಕೂಲ ಆಗಲು ಯೋಜನೆ ಜಾರಿ ಮಾಡಿದ್ವಿ. 4-5 ದಿನಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದೇವೆ ಎಂದು ತಿಳಿಸಿದರು.
ಇನ್ನೂ ಸರ್ಕಾರ ಕೂಡ ಈ ಬಗ್ಗೆ ಹೊಸ ಮಾರ್ಗಸೂಚಿಬಿಡುಗಡೆ ಮಾಡಿ ಅರ್ಜಿ ಸಲ್ಲಿಸುವ ವೇಳೆ ಉಂಟಾಗುವ ಒತ್ತಡ ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲದ ದೃಷ್ಠಿಯಿಂದ, ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ‘ಪ್ರಜಾ ಪ್ರತಿನಿಧಿ’ಯನ್ನ ನೇಮಿಸಿದೆ. ಈ ಪ್ರಜಾ ಪ್ರತಿನಿಧಿಗಳು, ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆತಡೆ ಎದುರಿಸುತ್ತಿರುವವರಿಗೆ ಸಹಾಯ ಮಾಡುತ್ತಾರೆ. ಇನ್ನು ಪ್ರಜಾ ಪ್ರತಿನಿಧಿಗಳು ಫಲನುಭವಿಗಳ ಮನೆಗೆ ಭೇಟಿ ನೀಡಿ, ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ಇನ್ನು ಇದಕ್ಕಾಗಿ ಅವ್ರಿಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಸ್ಪಷ್ಟ ಪಡೆಸಿದೆ.
