Uttarpradesh urinate case: ಈಗಾಗಲೇ ಬುಡಕಟ್ಟು ಜನಾಂಗ, ಕೀಳು ವರ್ಗದ ಜನರ (Dalit people) ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಹಲವಾರು ವಿಡಿಯೋಗಳು ವೈರಲ್ ಆಗಿದೆ. ಇದೀಗ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತೀವ್ರ ಗಾಯಗೊಂಡು ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ(Uttar Pradesh)ನಡೆದಿದೆ.
ಆಗ್ರಾದ ರಸ್ತೆಯೊಂದರಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯ ಮುಖದ ಮೇಲೆ ಒಬ್ಬರು ಮೂತ್ರ ವಿಸರ್ಜಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಉತ್ತರ ಪ್ರದೇಶ ಪೊಲೀಸರು ಸೋಮವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 30 ಸೆಕೆಂಡುಗಳ ವೀಡಿಯೊದಲ್ಲಿ , ಒಬ್ಬ ವ್ಯಕ್ತಿಯು ತೀವ್ರ ಗಾಯಗೊಂಡಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದನು. ಈತನಿಗೆ ಆರೋಪಿಯು ತಲೆಗೆ ಒದೆಯುವುದನ್ನು ಸಹ ಕಾಣಬಹುದು. ಆರೋಪಿಗಳು ಮತ್ತು ಇತರರು ನಿಂದಿಸುತ್ತಿರುವುದು ಸಹ ಕೇಳಿಸುತ್ತದೆ. ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಹೀನ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋ ಸುಮಾರು ಮೂರು ತಿಂಗಳ ಹಳೆಯದು ಎಂದು ತನಿಖೆಯಿಂದ ತಿಳಿದುಬಂದಿದೆ, ಆದರೆ ಇದುವರೆಗೆ ಯಾರೂ ತಮಗೆ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ವೀಡಿಯೊ ಬಗ್ಗೆ ತಿಳಿದ ನಂತರ ನಾವು ವಿವಿಧ ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ಪ್ರಜ್ಞಾಹೀನ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯನ್ನು ನಾವು ಆದಿತ್ಯ ಎಂದು ಗುರುತಿಸಿದ್ದೇವೆ, ಅವರು ಆರು ಸದಸ್ಯರನ್ನು ಒಳಗೊಂಡ ಗ್ಯಾಂಗ್ ಅನ್ನು ನಡೆಸುತ್ತಿದ್ದಾರೆ ಎಂದು ಸೂರಜ್ ಕುಮಾರ್ ರೈ ಹೇಳಿದರು.
ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಗ್ಯಾಂಗ್ಗೆ ಸೇರಿದವರು ಮತ್ತು ಇದು ಪರಸ್ಪರ ದ್ವೇಷದ ಕಾರಣದಿಂದಾಗಿ ಈ ಘಟನೆ ನಡೆದಿದೆ. ಬಂಧಿತ ಯುವಕ ಆದಿತ್ಯನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥನ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಮಧ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಘಟನೆ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣ ಬೆಳಕಿಗೆ ಬಂದ ನಂತರ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ನಿವಾಸಕ್ಕೆ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ ದಶ್ಮತ್ ರಾವತ್ರನ್ನು ಕರೆಯಿಸಿಕೊಂಡು, ಸಂತ್ರಸ್ತನನ್ನು ಖುರ್ಚಿ ಮೇಲೆ ಕೂರಿಸಿ, ತಾವು ಕೆಳಗೆ ಕುಳಿತು ಪಾದ ತೊಳೆದಿದ್ದಾರೆ. ನಂತರ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.
