Buta Kola: ಕರಾವಳಿ ಭಾಗದಲ್ಲಿ ದೈವಗಳ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ತುಳುನಾಡಿನಲ್ಲಿ ದೈವದ ಕುರಿತು ಅಪಾರವಾದ ನಂಬಿಕೆಯಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ವ್ಯವಹಾರ ಮಾಡಲು ಹೊರಟ ಸಂಸ್ಥೆಯೊಂದು ದೈವಕೋಲ, ಕಂಬಳದ ಹೆಸರಲ್ಲಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ರೀತಿ ಧಾರ್ಮಿಕ ನಂಬಿಕೆಯನ್ನೇ ವ್ಯವಹಾರ ಮಾಡಹೊರಟಿರುವ ಟೂರ್ ಏಜೆನ್ಸಿ(Tour agency)ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು, ಮುಂಬಯಿ ಸೇರಿದಂತೆ ಇನ್ನುಳಿದ ವ್ಯಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಈ ಟೂರ್ ಪ್ಯಾಕೇಜ್ ಹರಿದಾಡುತ್ತಿದ್ದು, ಹಲವರು ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

2024ರ ಫೆ.10 ಮತ್ತು 11ರಂದು ಈ ಪ್ಯಾಕೇಜ್ಗೆ ದಿನವನ್ನು ಘೋಷಣೆ ಮಾಡಿ ಟ್ರಾವೆಲ್ ಸಂಸ್ಥೆಯೊಂದು ದೈವಾರಾಧನೆಯ ಚಿತ್ರವೊಂದನ್ನು ಹಾಕಿ ಒಬ್ಬ ವ್ಯಕ್ತಿಗೆ 2899ರೂ. ಮೌಲ್ಯದ ಪ್ಯಾಕೇಜ್ವೊಂದನ್ನು ಘೋಷಣೆ ಮಾಡಿದೆ. ಪ್ಯಾಕೇಜ್ನಲ್ಲಿ ನದಿಯಲ್ಲಿ ಬೋಟಿಂಗ್, ಉಪ್ಪಿನಂಗಡಿ ಕಂಬಳ ವೀಕ್ಷಣೆ, ಬೊಳ್ಳಾಡಿ ಫಾರ್ಮ್ನನಲ್ಲಿ ಪಾರ್ಟಿ, ಬೊಳ್ಳಾಡಿ ಮನೆಯಲ್ಲಿ ಭೂತ ಕೋಲ, ಬೀರಮಲೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಪ್ರವಾಸ ಎಂದು ನಮೂದಿಸಲಾಗಿದೆ.

ಈ ಕುರಿತು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕೂಡಲೇ ಈ ಪ್ಯಾಕೇಜನ್ನು ರದ್ದುಪಡಿಸುವಂತೆ ಸೂಚಿಸಿದ್ದಾರೆ. ದೈವಾರಾಧನೆ ನಂಬಿಕೆಯೇ ಹೊರತು ಅದು ವ್ಯವಹಾರ ಉದ್ದೇಶವಾಗಬಾರದು. ದೈವರಾಧನೆಗೆ ಅದರದೇ ಆದ ಪೂರ್ವ ಪರಂಪರೆಯಿದ್ದು, ಇದನ್ನು ಟೂರ್ ಪ್ಯಾಕೇಜ್ ಮಾಡುವ ಮೂಲಕ ಧಕ್ಕೆ ತರುವ ಸಾಹಸಕ್ಕೆ ಯಾರೂ ಇಳಿಯಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತವಾಗಿದೆ. ಒಂದು ವೇಳೆ ಪ್ಯಾಕೇಜ್ ಘೋಷಿಸಿದ ಟ್ರಾವಲ್ ಸಂಸ್ಥೆ ಈ ಪ್ಯಾಕೇಜ್ ಮುಂದುವರಿಸಿದರೆ ಅದಕ್ಕೆ ತಕ್ಕುದಾದ ಕ್ರಮವನ್ನು ದೈವಾರಾಧಕರು ತೆಗೆದುಕೊಳ್ಳಲಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೈವಗಳನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶನ ಮಾಡಿ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕಾಗಿದ್ದು, ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತುಳು ಪರ ಹೋರಾಟಗಾರ ರೋಶನ್ ರೆನಾಲ್ಡ್ ಎಚ್ಚರಿಕೆ ನೀಡಿದ್ದಾರೆ.
