Putturu: ದಕ್ಷಿಣ ಕನ್ನಡದಲ್ಲಿ ತಲೆಯೆತ್ತಿರುವ ಪುತ್ತಿಲ ಪರಿವಾರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಕಳೆದ ವರ್ಷ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಬಹಳ ವಿಜೃಂಭಣೆಯಿಂದ ನೆರವೇರಿತ್ತು. ಈ ವರ್ಷವೂ ಕೂಡ ಈ ಕಾರ್ಯಕ್ರಮ ನಡೆಸಲು ಪುತ್ತಿಲ ಪರಿವಾರ ದೇವ ಟ್ರಸ್ಟ್ ತೀರ್ಮಾನಿಸಿದೆ.
ಹೌದು, ಡಿಸೆಂಬರ್ 28 ಮತ್ತು 29 ರಂದು ಮಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ(Arun Kumar Puttila) ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ‘ಭಕ್ತರ ಬೇಡಿಕೆಯ ಹಿನ್ನಲೆಯಲ್ಲಿ ಈ ಸಲ ಎರಡನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಏರ್ಪಡಿಸಲು ಟ್ರಸ್ಟ್ ತೀರ್ಮಾನಿಸಿದೆ. ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಈ ಬಾರಿಯೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಲ್ಯಾಣೋತ್ಸವದ ಜೊತೆಗೆ ಧರ್ಮಸಂಗಮ ಕಾರ್ಯಕ್ರಮವನ್ನೂ ಏಪರ್ಡಿಸಲಾಗಿದೆ’ ಎಂದು ಹೇಳಿದ್ದಾರೆ.
ಅಲ್ಲದೆ ಕಲ್ಯಾಣೋತ್ಸವದ ಅಂಗವಾಗಿ ಡಿಸೆಂಬರ್ 27 ರಂದು ದರ್ಬೆ ವೃತ್ತದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಡಿಸೆಂಬರ್ 28 ರಂದು ಸಂಜೆ 4,30 ಕ್ಕೆ ಬೊಳುವಾರಿನಲ್ಲಿ ಶ್ರೀನಿವಾಸ ದೇವರನ್ನು ಬರಮಾಡಿಕೊಂಡು ವೈಭವದ ಬೃಹತ್ ಶೋಭಾಯಾತ್ರೆಯ ಮೂಲಕ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಕಾರ್ಯಕ್ರಮ ನಡೆಯುವ ಈಶ ಮಂಟಪಕ್ಕೆ ಕರೆತರಲಾಗುತ್ತದೆ. ಅಂದು ಸಂಜೆ 6 ಗಂಟೆಯಿಂದ ಹಿಂದೂ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಂಗಮ ಧಾರ್ಮಿಕ ಸಭೆ ನಡೆಯಲಿದೆ. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದ ಅವರು ಡಿ. 29 ರಂದು ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಬೆಳಿಗ್ಗಿನಿಂದಲೇ ಆರಂಭಗೊಳ್ಳಲಿದ್ದು, ಸಂಜೆ 6 ಗಂಟೆಗೆ ಸಮಸ್ತ ಹಿಂದೂ ಬಂಧುಗಳ ಸಮ್ಮುಖದಲ್ಲಿ ಶ್ತೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
