Belthangady: ಬೆಳ್ತಂಗಡಿ (Belthangady) ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಶಿಕ್ಷಕರು ಕಳೆದ ತಿಂಗಳು 28ನೇ ತಾರೀಕು ನಿವೃತ್ತರಾಗಿದ್ದು, ಶಾಲೆಯಲ್ಲಿ ಇದ್ದ ಓರ್ವ ಶಿಕ್ಷಕರು ಇಲ್ಲದೆ ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ಸಂದರ್ಭದಲ್ಲಿ ಶಾಲೆಯ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಅಶ್ವಮೇಧ ಫ್ರೆಂಡ್ಸ್ ಆಯೋಜನೆ ಮಾಡಿದ ವಾಲಿಬಾಲ್ ಪಂದ್ಯಾಟದ ವೇದಿಕೆಯಲ್ಲಿ ಶಾಲೆಯ ಶಿಕ್ಷಕರ ಕೊರತೆಯ ಬಗ್ಗೆ ಶಾಲೆಯ ಸಂಚಾಲಕರಾದ ಶ್ರೀ ವಾಮನ್ ತಾಮಸ್ಕರ್ ರವರು ಮತ್ತು ಧರ್ಮರಾಜ್ ಅಡಕ್ಕಾಡಿ ರವರು ಈ ವಿಷಯವನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ರವರಿಗೆ ಹೇಳಿದರು. ಹೇಗಾದರೂ ಮಾಡಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಸಿ, ಗ್ರಾಮಿಣ ಭಾಗದ ಶಾಲೆಗೆ ಯಾರು ಬರುವುದಿಲ್ಲ, ಸರ್ಕಾರ ಮೇಲೆ ಒತ್ತಡ ಹಾಕಿ ಇಲ್ಲದಿದ್ದರೆ ಶಾಲೆಯನ್ನು ಮುಚ್ಚಬೇಕಾದೀತು ಎಂದು ತಿಳಿಸಿದ್ದರು.
ಈ ಮನವಿಗೆ ಕೂಡಲೇ ಕಾರ್ಯಪ್ರವೃತ್ತರಾದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ರವರು ತಾಲ್ಲೂಕಿನ ಶಿಕ್ಷಣ ಅಧಿಕಾರಿ, ಜಿಲ್ಲೆಯ ಮತ್ತು ರಾಜ್ಯ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಶ್ರಮಿಸಿದ್ದಾರೆ. ಇದರಿಂದ ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದರು.
