Home » Tumkuru: ತುಮಕೂರಿನಲ್ಲಿ ಮಗುವಿನ ಹತ್ಯೆ ಪ್ರಕರಣ: ಫೋಟೋ ಬಯಲು ಮಾಡಿದ ಸತ್ಯ !!

Tumkuru: ತುಮಕೂರಿನಲ್ಲಿ ಮಗುವಿನ ಹತ್ಯೆ ಪ್ರಕರಣ: ಫೋಟೋ ಬಯಲು ಮಾಡಿದ ಸತ್ಯ !!

by ಕಾವ್ಯ ವಾಣಿ
0 comments

Tumkuru: ತುಮಕೂರು (Tumkuru) ಜಿಲ್ಲೆ ಸಿದ್ಧಲಿಂಗಯ್ಯನ ಪಾಳ್ಯದಲ್ಲಿ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪದಲ್ಲಿ 24 ವರ್ಷದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ತುಮಕೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಮಗು ಹಾವು ಕಚ್ಚಿ ಮೃತಪಟ್ಟಿದೆ ಎಂದು ಆರೋಪಿ ಬಿಂಬಿಸಿದ್ದ. ಆದರೆ, ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೊದಿಂದ ಅನುಮಾನ ವ್ಯಕ್ತವಾಗಿದ್ದು, ಚಂದ್ರಶೇಖರ್ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ, ಆತನನ್ನು ಬಂಧಿಸಲಾಗಿದೆ. ಜತೆಗೆ, ಮಗುವಿನ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಚಂದ್ರಶೇಖರ್ ಮೂಲತಃ ಚಾಮರಾಜನಗರದವನು. ಕ್ರಷರ್​​ನಲ್ಲಿ ಲಾರಿ ಚಾಲಕನಾಗಿದ್ದಾನೆ. ಮತ್ತೊಂದೆಡೆ, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾವ್ಯಾ ಎಂಬ ಮಹಿಳೆ ಮೊದಲೇ ಅಶೋಕ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ, ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರ್ ಜೊತೆ ಓಡಿ ಹೋಗಿದ್ದಳು. ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ನಂತರ ಮಗುವಿನ ವಿಚಾರವಾಗಿ ಈ ಜೋಡಿ ಮಧ್ಯೆ ಜಗಳವಾಗುತ್ತಿತ್ತು. ಮಗುವಿನ ವಿಷಯವಾಗಿ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಮಾರ್ಚ್ 20ರಂದು, ಕಾವ್ಯ ಕೆಲಸಕ್ಕೆ ಹೋದ ಸಮಯದಲ್ಲಿ ಚಂದ್ರಶೇಖರ್ ಮಗುವಿಗೆ (ಮಿಥುನ್ ಗೌಡ) ಹಲ್ಲೆ ನಡೆಸಿದ್ದ. ಇದರಿಂದ, ತೀವ್ರ ಗಾಯಗೊಂಡ ಮಿಥುನ್ ಪ್ರಜ್ಞೆ ತಪ್ಪಿಬಿದ್ದಿದ್ದ. ಇದನ್ನು ಮುಚ್ಚಿಹಾಕಲು, ಮಗುವಿಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿ ಸ್ಥಳೀಯರನ್ನು ನಂಬಿಸಲು ಪ್ರಯತ್ನಿಸಿದ್ದ. ತಕ್ಷಣವೇ ಗ್ರಾಮಸ್ಥರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಿಥುನ್​ನನ್ನು ಊರ್ಡಿಗೆರೆ ಕ್ಲಿನಿಕ್‌ಗೆ ಕರೆದೊಯ್ದಿದ್ದರು. ಆದರೆ, ವೈದ್ಯರು ಪರೀಕ್ಷೆ ನಡೆಸಿದಾಗ ಮಿಥುನ್ ಮೃತಪಟ್ಟಿರುವುದು ದೃಢಪಟ್ಟಿತ್ತು.

You may also like