Kolara: ಪತಿಯ ಕುಟುಂಬದವರಿಂದ ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಡೆತ್ನೋಟ್ ಬರೆದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಮಾಲೂರು ತಾಲೂಕಿನ ಕಾಡದೇನಹಳ್ಳಿಯಲ್ಲಿ ನಡೆದಿದೆ.
ರಶ್ಮಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ದಿನೇಶ್ ಹಾಗೂ ರಶ್ಮಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದು ವರ್ಷದ ಹಿಂದೆ ಪ್ರೀತಿ ಮದುವೆಯಾಗಿದ್ದರು.
ರಶ್ಮಿ ಡೆತ್ನೋಟ್ನಲ್ಲಿ ʻರೀ ಸಾರಿ ನಿಮ್ಮ ಅಮ್ಮ, ದೊಡ್ಡಮ್ಮನ ಕಾಟ ತಡೆಯೋಕೆ ಆಗುತ್ತಿಲ್ಲ. ಮದುವೆಯಾಗಿ ಬಂದಾಗಿನಿಂದ ನೆಮ್ಮದಿಯೇ ಇಲ್ಲ. ನನ್ನಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ನನ್ನ ಗಂಡ ಒಳ್ಳೆಯವನೇ, ಆದರೆ ಮನೆಯವರು ಒಳ್ಳೆಯವರಲ್ಲ. ಅದಕ್ಕೆ ನೀವು ಬರುವಷ್ಟರಲ್ಲೇ ಸಾಯುತ್ತಿದ್ದೇನೆ, ಬೈʼ ಎಂದು ಬರೆದಿರುವ ಕುರಿತು ವರದಿಯಾಗಿದೆ.
ರಶ್ಮಿಗೆ ಮೂರು ತಿಂಗಳ ಹಿಂದೆ ಗರ್ಭಪಾತವಾಗಿದ್ದು, ವರದಕ್ಷಿಣೆ ನೀಡಿಲ್ಲ, ಮಗು ಆಗಿಲ್ಲ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ದಿನೇಶ್ ಗೌಡ, ಮಾವ ಅಪ್ಪಾಜಿ ಗೌಡ, ಅತ್ತೆ ಸರೋಜಮ್ಮ, ದೊಡ್ಡತ್ತೆ ರತ್ನಮ್ಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
