5
Mangaluru : ಹಿಂದೂ ಹಿಂದುತ್ವ ಎಂದು ಚಿಕ್ಕ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಬೀದಿಗೆ ಇಳಿಯುತ್ತಾರೆ. ಬಳಿಕ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ನಮ್ಮ ಮಕ್ಕಳು ನಮ್ಮ ಕಣ್ಣಾರೆ ಸಾವಿಗೀಡಾದರೆ ಹೇಗೆ ಸಹಿಸಲು ಸಾಧ್ಯ? ಎಂದು ಹತ ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ಕಣ್ಣೇರು ಹಾಕಿದ್ದಾರೆ.
ಅಲ್ಲದೆ ಮನೆಯ ಆಧಾರ ಸ್ತಂಭವಾಗಿದ್ದ ಅವನಿಗೆ ಕೇವಲ 31 ವರ್ಷ ಪ್ರಾಯ. ಈಗ ನಮಗೆ ಯಾರಿದ್ದಾರೆ ? ನಾಲ್ಕು ದಿನ ನಮ್ಮ ಮನೆಗೆ ಬಂದು ಸಮಾಧಾನ ಹೇಳಿ ಹೋಗುತ್ತಾರೆ. ಮತ್ತೆ ತಿರುಗಿಯೂ ನೋಡುವುದಿಲ್ಲ. ಮಗನನ್ನು ಕಳೆದುಕೊಂಡಿದ್ದೇವೆ. ನಮಗಿನ್ನು ಯಾರೂ ಇಲ್ಲ. ಈ ವಯಸ್ಸಿನಲ್ಲಿ ಮಗನನ್ನು ಕಳಕೊಂಡು ಅಪ್ಪ-ಅಮ್ಮ ಆದ ನಾವು ಕೊರಗುವಂತಾಗಿದೆ ಎಂದು ಮೋಹನ್ ಶೆಟ್ಟಿ ಕಣ್ಣೀರಾದರು.
ಅಲ್ಲದೆ ‘ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ನಿಜ. ಈಗ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೆ. ಹಾಗಾಗಿ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಹಿಂದೂಗಳಿಗೆ ಭದ್ರತೆ ಇಲ್ಲ’ ಎಂದೂ ಅವರು ಹೇಳಿದರು.
