Sonu Nigam: ಕನ್ನಡಿಗರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭಾರತದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಿದೆ. ಚಲನಚಿತ್ರ ಮಂಡಳಿ ಈ ಕ್ರಮ ಕೈಗೊಂಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಸೋನು ನಿಗಮ್ ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಹೌದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೀರ್ಘವಾಗಿ ಪತ್ರ ಬರೆದುಕೊಂಡಿರುವ ಸೋನು ನಿಗಮ್ ಅವರು ”ನಮಸ್ಕಾರ.. ನಾನು ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಮತ್ತು ಜನರ ಮೇಲೆ ಅಪರೂಪದ ಪ್ರೀತಿ ಹರಿಸಿರುವೆ. ಅದು ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ನಾನು ಜಗತ್ತಿನ ಎಲ್ಲಿ ಇದ್ದರೂ ಸಹ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡೆಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ.
‘ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಾನು ಪ್ರತಿಯೊಂದು ಕರ್ನಾಟಕದ ಕಾರ್ಯಕ್ರಮಕ್ಕಾಗಿಯೂ ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳನ್ನು ತಯಾರಿಸಿಕೊಂಡಿರುತ್ತೇನೆ. ಆದರೆ, ನಾನು ಇನ್ನೂ ಬಾಲಕನಲ್ಲ. ಯಾರಿಂದಲಾದರೂ ಅವಮಾನವನ್ನು ಸಹಿಸುವ ವಯಸ್ಸಿಲ್ಲ. ನನಗೆ ಈಗ 51 ವರ್ಷ, ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ. ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಿದಾಗ, ಅದು ನನ್ನ ಕೆಲಸದ ವಿಚಾರದಲ್ಲಿ ಎರಡನೇ ಭಾಷೆಯಾದ ಕನ್ನಡವೇ ಆಗಿರಲಿ ನಾನು ಪ್ರತಿಕ್ರಿಯಿಸುದು ಸಹಜ. ಅದು ಕೂಡ ನಾನು ಮೊದಲ ಹಾಡು ಹಾಡಿದ ತಕ್ಷಣವೇ. ಅವನು ಇನ್ನೂ ಕೆಲವರನ್ನು ಪ್ರಚೋದಿಸಿದ. ಅವರದೇ ಜನರು ಕೂಡಾ ಅವಮಾನವಾಗದಂತೆ ನಿಲ್ಲಿಸಬೇಕೆಂದು ಕೇಳುತ್ತಿದ್ದರು.
ನಾನು ಅವರಿಗೆ ತುಂಬಾ ಶಾಂತಿಯುತವಾಗಿ, ಪ್ರೀತಿಯಿಂದ ಹೇಳಿದೆ. ಈಗ ಮಾತ್ರ ಕಾರ್ಯಕ್ರಮ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟು ಮಾಡಲ್ಲ. ಆದರೆ ನೀವು ನನಗೆ ಕಾರ್ಯಕ್ರಮವನ್ನು ನನ್ನ ಯೋಜನೆಯಂತೆ ಮುಂದುವರಿಸಲು ಅವಕಾಶ ನೀಡಬೇಕೆಂದೆ. ಪ್ರತಿಯೊಬ್ಬ ಕಲಾವಿದನು ಹಾಡುಗಳ ಪಟ್ಟಿ ರೂಪಿಸಿಕೊಂಡಿರುವುದರಿಂದ ಸಂಗೀತಗಾರರು ಹಾಗೂ ತಾಂತ್ರಿಕರು ಎಲ್ಲರೂ ಸಮನ್ವಯದಲ್ಲಿರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು, ಬೆದರಿಕೆ ಹಾಕಲು ಕಾತರವಾಗಿದ್ದರು.
ಇಲ್ಲಿ ತಪ್ಪು ಯಾರು ಮಾಡಿದರು ಎಂಬುದನ್ನು ನೀವೇ ಹೇಳಿ. ನಾನು ದೇಶಭಕ್ತನಾಗಿದ್ದರಿಂದ, ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ಯಾರನ್ನಾದರೂ ನಾನು ತಾತ್ವಿಕವಾಗಿ ವಿರೋಧಿಸುತ್ತೇನೆ. ವಿಶೇಷವಾಗಿ ಪಹಲ್ಗಾಮ್ನಲ್ಲಿ ಸಂಭವಿಸಿದ ಘಟನೆಗಳನ್ನು ನೋಡುವ ಬಳಿಕ. ನಾನು ಅವರಿಗೆ ಬುದ್ಧಿವಾದ ಹೇಳಬೇಕಾಯಿತು. ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದಕ್ಕೆ ಸಂಭ್ರಮಿಸಿದರು. ವಿಷಯ ಅಲ್ಲಿ ಅಂತ್ಯವಾಯಿತು. ನಾನು ನಂತರ ಒಂದು ಗಂಟೆಗಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದೆ. ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಾಗಿದೆ.
ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕನ್ನಡದ ವಿವೇಕವಂತ ಜನತೆಗೆ ಬಿಟ್ಟುಬಿಡುತ್ತೇನೆ. ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಗೌರವ ಮತ್ತು ನಂಬಿಕೆ ಇಟ್ಟುಕೊಂಡಿದ್ದೇನೆ ಮತ್ತು ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನಾನು ನೀಡುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪು ಏನೇ ಆಗಿರಲಿ, ಯಾವುದೇ ದ್ವೇಷವಿಲ್ಲದೆ ಅದನ್ನು ಸದಾ ಗೌರವದಿಂದ ಜ್ಞಾಪಿಸಿಕೊಳ್ಳುತ್ತೇನೆ. ಧನ್ಯವಾದಗಳು,ಸೋನು ನಿಗಮ್’ ಎಂದು ಬರೆದುಕೊಂಡಿದ್ದಾರೆ.
ಇದಾದ ಬಳಿಕ ಸೋನು ನಿಗಮ್ ಅವರು ಕಡೆಗೂ ತಮ್ಮಿಂದಾದ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿದ್ದಾರೆ. ಮಾ. 5ರಂದು ತಮ್ಮ ಇನ್ ಸ್ಟಾ ಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, Sorry ಕರ್ನಾಟಕ ಎಂದು ಹೇಳಿದ್ದು, ಜೊತೆಗೆ, ಕನ್ನಡಿಗರ ಪ್ರೀತಿಯ ಮುಂದೆ ನನ್ನ ಅಹಂಕಾರವೇನೂ ದೊಡ್ಡದಲ್ಲ ಎಂದು ತಿಳಿಸಿದ್ದಾರೆ.
