Bengaluru Stampede: ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ದಿನಾಂಕ 04/06/25 ರಂದು ನೂಕು ನುಗ್ಗಲು ಮತ್ತು ಕಾಲುತುಳಿತದಿಂದ 11 ಜನ ವಿರಾಟ್ ಕೊಹ್ಲಿ ಅಭಿಮಾನಿಗಳು ದುರ್ಮರಣ ಹೊಂದಲು ಕಾರಣರಾದ ಆರ್ ಸಿ ಬಿ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ ಎಂ ವೆಂಕಟೇಶ್ ದೂರು ದಾಖಲಿಸಿದ್ದಾರೆ.

ಚಿನ್ನಸ್ವಾಮಿಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ 11 ಜನ ಕಾಲ್ಕುಳಿತದಿಂದ ಮರಣ ಹೊಂದಿದ್ದು, ಇದಕ್ಕೆ ಸಂಬಂಧಿಸಿದಂತೆ ತಮ್ಮ ಠಾಣೆಯಲ್ಲಿ ಮತ್ತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಹಲವು ವ್ಯಕ್ತಿಗಳ ವಿರುದ್ಧ ದೂರುಗಳು ದಾಖಲಾಗಿವೆ. ಐಪಿಎಲ್ ಎಂಬುದು ಒಂದು ಕ್ರೀಡೆಯಲ್ಲ. ಅದು ಕ್ರಿಕೆಟ್ ಆಟದ ಕಲುಷಿತಗೊಂಡ ಜೂಜಾಟದ ಒಂದು ರೂಪ ಮತ್ತು ಮಾದರಿ.. ಅದರಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಮನುಷ್ಯರನ್ನು (ಆಟಗಾರರನ್ನು)ವಸ್ತು ರೂಪದ ಹರಾಜಿನಂತೆ ಕೊಂಡು, ಅವರನ್ನು ಖಾಸಗಿ ನೌಕರರಂತೆ ನಡೆಸಿಕೊಳ್ಳುತ್ತಾ, ಜನರಿಗೆ ಮನರಂಜನೆ ನೀಡಿ ಹಣ ಮಾಡುವ ಒಂದು ದಂಧೆ. ಅದಲ್ಲಿ ಚಿಯರ್ ಗರ್ಲ್ಸ್ ಎಂಬ ಕ್ಯಾಬರೆ ರೀತಿಯ ನೃತ್ಯವೂ ಇರುತ್ತದೆ. ಜಗತ್ತಿನ ಯಾವ ಕ್ರೀಡೆಯಲ್ಲಿಯೂ ಈ ರೀತಿಯ ಮನರಂಜನೆ ಇರುವುದಿಲ್ಲ.
ಇಂತಹ ಜೂಜಾಟದಲ್ಲಿ ಭಾಗಿಯಾಗಿ ಜನರನ್ನು ಪ್ರಚೋದಿಸಿ ಒಂದು ನಿರ್ದಿಷ್ಟ ಜಾಗದಲ್ಲಿ ಎಲ್ಲರೂ ಗುಂಪಾಗಿ ಸೇರಿ ಈ ದುರ್ಘಟನೆಗೆ ಕಾರಣರಾದವರಲ್ಲಿ ಬೆಂಗಳೂರು ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಅವರು ಅತ್ಯಂತ ಪ್ರಮುಖರು. ಆದ್ದರಿಂದ ತಾವು ದಯವಿಟ್ಟು ಈ ದುರ್ಘಟನೆ ಪ್ರಕರಣದ ಎಫ್ಐಆರ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಬೆಂಗಳೂರಿನ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಬಂದ ವಿರಾಟ್ ಕೊಹ್ಲಿ ಅಭಿಮಾನಿಗಳೇ ಹೆಚ್ಚಾಗಿದ್ದು ಕೊಹ್ಲಿಯನ್ನು ನೋಡಿ ಕಣ್ಣುಂಬಿಸಿಕೊಳ್ಳಬೇಕೆಂಬ ಹುಚ್ಚು ಹಂಬಲದಿಂದ ಬಂದವರು ಕಾಲ್ತುಳಿತದಲ್ಲಿ ಮರಣ ಹೊಂದಿದ್ದಾರೆ. ಇವರನ್ನು ನಿಯಂತ್ರಿಸುವಲ್ಲಿ ಪೊಲೀಸರು ತಮ್ಮ ಕರ್ತವ್ಯ ಲೋಪವನ್ನು ಮಾಡಿರುತ್ತಾರೆ ಎಂದು ಹೇಳಲಾಗಿದೆ.
ಇದೇ ವೇಳೆ ವೆಂಕಟೇಶ್ ಅವರು ನೀಡಿರುವ ದೂರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿದ್ದು, ಸದರಿ ದೂರು ಅರ್ಜಿಯ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 123/2025 ರೀತ್ಯಾ ಪ್ರಕರಣ ದಾಖಲಾಗಿ ಪ್ರಕರಣ ತನಿಖೆಯಲ್ಲಿರುತ್ತದೆ. ಆದ್ದರಿಂದ ತಾವು ನೀಡಿರುವ ದೂರನ್ನು ಪರಿಶೀಲಿಸಲಾಗುವುದು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಸಬ್ ಇನ್ಸೆಪೆಕ್ಟರ್ ತಿಳಿಸಿದ್ದಾರೆ
