5
Shivraj Singh: ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಗಡಿಬಿಡಿಯಲ್ಲಿ ತಮ್ಮ ಪತ್ನಿಯನ್ನೇ ಬಿಟ್ಟುಬಂದು, ಬಳಿಕ ಅವರನ್ನು ಕರೆತರಲು 22 ಬೆಂಗಾವಲು ಪಡೆ ವಾಹನಗಳೊಂದಿಗೆ ಮರಳಿದ ಅಚ್ಚರಿ ಘಟನೆ ನಡೆದಿದೆ.
ಹೌದು, ಶಿವರಾಜ್ ಸಿಂಗ್ ಹಾಗೂ ಅವರ ಪತ್ನಿ ಸಾಧನಾ ಗುಜರಾತ್ ಪ್ರವಾಸಕ್ಕೆ ಹೋಗಿದ್ದರು. ಆಗ ಜುನಾಗಢದಲ್ಲಿರುವ ಅಲ್ಲಿನ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಸಿಬ್ಬಂದಿಯನ್ನು ಭೇಟಿಯಾದ ಸಚಿವರು, ನೇರವಾಗಿ ಲಖ್ಪತಿ ದೀದೀಯರ ಜತೆ ಸಂವಾದಕ್ಕೆ ತೆರಳಿದ್ದರು. ಇತ್ತ ಸಾಧನಾ ಅವರು ಸಂಶೋಧನಾ ಕೇಂದ್ರದಲ್ಲೇ ಕಾಯುತ್ತಾ ಕುಳಿತಿದ್ದಾರೆ.
ರಾತ್ರಿ 8 ಗಂಟೆಗೆ ವಿಮಾನವಿದ್ದುದರಿಂದ, ಅದೇ ಗಡಿಬಿಡಿಯಲ್ಲಿ ಸಿಂಗ್ ರಾಜ್ಕೋಟ್ ಕಡೆ ಹೊರಟಿದ್ದಾರೆ. ಸ್ವಲ್ಪ ಸಮಯದ ಬಳಿಕ ಪತ್ನಿ ತಮ್ಮೊಂದಿಗೆ ಇಲ್ಲದಿರುವುದನ್ನು ಗಮನಿಸಿದ ಅವರು, ಗಾಡಿಯನ್ನು ಜುನಾಗಢದ ಕಡೆ ತಿರುಗಿಸಿದ್ದಾರೆ. ಬಳಿಕ 22 ಬೆಂಗಾವಲು ಪಡೆ ವಾಹನಗಳೊಂದಿಗೆ ಹಿಂದಿರುಗಿ ಪತ್ನಿಯನ್ನು ಕರೆ ತಂದಿದ್ದಾರೆ.
