ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರ ದೇಹದಲ್ಲಿ ಬ್ಲೇಡ್ ಉಳಿದಿರುವ ಘಟನೆ ನಡೆದಿದೆ. ಫ್ಯಾಮಿಲಿ ಫ್ಲ್ಯಾನಿಂಗ್ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ದೇಹದಲ್ಲಿ ವೈದ್ಯರು ಬ್ಲೇಡ್ ಉಳಿಸಿದ್ದಾರೆ. ಈ ಘಟನೆ ಸಂಚಲನ ಮೂಡಿಸಿದೆ.
ರಮಾದೇವಿ (22) ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ.ನಾರಾಯಣ ಸ್ವಾಮಿ ಮತ್ತು ಅವರ ಸಿಬ್ಬಂದಿ ರಮಾದೇವಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ಕೆಲವು ದಿನಗಳ ನಂತರ ನೋವು ಶುರುವಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಇದು ನೋವು ಸಾಮಾನ್ಯ ಎಂದು ಹೇಳಿ ವಾಪಸ್ ಮನೆಗೆ ಕಳುಹಿಸಿದರು.
ಆದರೆ ನೋವು ಹೆಚ್ಚಾಗಿದ್ದು, ಸ್ಕ್ಯಾನಿಂಗ್ ಮಾಡಿಸಿದಾಗ ವರದಿಯಲ್ಲಿ ಮಹಿಳೆಯ ಯೋನಿಯ ಬಳಿ ಸರ್ಜಿಕಲ್ ಬ್ಲೇಡ್ ಇರುವುದು ಕಂಡು ಬಂದಿದೆ. ಮಹಿಳೆಯ ಕುಟುಂಬದವರು ತಮ್ಮ ಕೋಪವನ್ನು ವೈದ್ಯರ ಮೇಲೆ ತೋರಿಸಿದ್ದಾರೆ. ನ್ಯಾಯಕ್ಕಾಗಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಜೀವಗಳನ್ನು ಉಳಿಸಬೇಕಾದ ವೈದ್ಯರು ಇಷ್ಟೊಂದು ನಿರ್ಲಕ್ಷ್ಯ ಮಾಡುವುದೇ? ಎಂದು ಆರೋಪ ಮಾಡಲಾಗಿದೆ.
ಮಹಿಳೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.
