Ballary : ಬಳ್ಳಾರಿಯಲಿ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು 25 ಲಕ್ಷ ಪರಿಹಾರವನ್ನು ನೀಡಿ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಹೌದು, ಬಳ್ಳಾರಿಯ ಹುಸೇನ್ ನಗರ ನಿವಾಸಿಯಾಗಿದ್ದ ರಾಜಶೇಖರ ರೆಡ್ಡಿ ಅವರು ಬ್ಯಾನರ್ ಗಲಾಟೆ ಸಂದರ್ಭದಲ್ಲಿ ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟಿದ್ದರು. ಈ ದುರ್ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬವನ್ನು ಭೇಟಿ ಮಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವಾಗಿ ₹25 ಲಕ್ಷ ಹಣವನ್ನು ನೀಡಿದ್ದರು. ಇದೀಗ 25ಲಕ್ಷ ರೂ ನಗದು ಪರಿಹಾರ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಹೊಸ ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಿಂದೂಪರ ಕಾರ್ಯಕರ್ತ ತೇಜಸ್ ಗೌಡ ಈ ದೂರನ್ನು ನೀಡಿದ್ದು, ಸಚಿವ ಜಮೀರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆಂದು ತಿಳಿದುಬಂದಿದೆ.
RBI ನಿಯಮ ಉಲ್ಲಂಘನೆ ಆರೋಪ:
RBI ಹಾಗೂ ಆದಾಯ ತೆರಿಗೆ ಕಾಯ್ದೆಗಳ ಪ್ರಕಾರ, ₹2 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ವ್ಯವಹರಿಸುವುದು ನಿಯಮಬಾಹಿರ ಎನ್ನಲಾಗಿದೆ. ಆದರೆ ಸಚಿವರು ಸುಮಾರು ₹25 ಲಕ್ಷ ಹಣವನ್ನು ನಗದು ರೂಪದಲ್ಲೇ ನೀಡಿರುವುದರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ನಿಯಮವೇನು?
ನಮ್ಮ ದೇಶದಲ್ಲಿ 2017-18 ರಲ್ಲಿ ಆರ್ಬಿಐ ನಿರ್ದೇಶನ ಹಾಗೂ ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಬೇರೆಯವರಿಗೆ ನೀಡುವಂತಿಲ್ಲ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬೇರೆಯವರಿಂದ ಪಡೆಯುವಂತಿಲ್ಲ. ಇದು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269ST ಸೆಕ್ಷನ್ಗೆ ವಿರುದ್ಧವಾಗಿದೆ. ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269ರ ಅಡಿ ಯಾರೇ ಆಗಲಿ ದಿನವೊಂದಕ್ಕೆ ಬೇರೊಬ್ಬರಿಗೆ 2 ಲಕ್ಷ ರೂಪಾಯಿ ಹಣವನ್ನು ಮಾತ್ರ ನಗದು ರೂಪದಲ್ಲಿ ನೀಡಲು ಅವಕಾಶ ಇದೆ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಚೆಕ್, ಡಿ.ಡಿ. ಮೂಲಕವೇ ನೀಡಬೇಕು. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ.
