ಮಂಗಳೂರು: ನಗರದ ಕಾವೂರಿನಲ್ಲಿ ಬಾಂಗ್ಲಾದೇಶದ ಪ್ರಜೆ ಎಂದು ಆರೋಪ ಮಾಡಿ ಕಾರ್ಮಿಕನ ಮೇಲೆ ನಾಲ್ವರು ಯುವಕರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜ.11 ರ ಸಂಜೆ ನಡೆದಿದೆ.
ಕಾರ್ಮಿಕ ದಿಲ್ಶಾನ್ ಅನ್ಸಾರಿ ಜಾರ್ಖಂಡ್ ಮೂಲದವನಾಗಿದ್ದು, ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ದಿಲ್ಶಾನ್ ಅನ್ಸಾರಿ ಕಳೆದ 10-15 ವರ್ಷಗಳಿಂದ ವರ್ಷಕ್ಕೆ 4-5 ತಿಂಗಳುಗಳ ಕಾಲ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ನಿನ್ನೆ ಸಂಜೆ ಕಾವೂರಿನ ಬಳಿ ಸ್ಥಳೀಯರಾದ ಸಾಗರ್, ಧನುಷ್, ಲಾಲು ಅಲಿಯಾಸ್ ರತೀಶ್ ಹಾಗೂ ಮೋಹನ್ ಎಂಬ ನಾಲ್ವರು ಯುವಕರು ದಿಲ್ಶಾನ್ ಮೇಲೆ ಭಾರತೀಯ ಪ್ರಜೆ ಎನ್ನುವುದಕ್ಕೆ ದಾಖಲೆ ತೋರಿಸಲು ಒತ್ತಾಯಿಸಿದ್ದು, ದಾಖಲೆ ತೋರಿಸದಿದ್ದಕ್ಕೆ ಆತನ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದರ ಪರಿಣಾಮ ದಿಲ್ಶನ್ಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವ ಉಂಟಾಗಿದೆ.
ಹಲ್ಲೆಯ ವೇಳೆ ಸ್ಥಳದಲ್ಲಿ ಒಬ್ಬ ಮಹಿಳೆ ಮಧ್ಯ ಪ್ರವೇಶಿಸಿ ದಿಲ್ಶಾನ್ ಅವರನ್ನು ರಕ್ಷಣೆ ಮಾಡಿದ್ದಾರೆ. ಹಲ್ಲೆ ನಂತರ ದಿಲ್ಶನ್ ಮನೆಗೆ ತೆರಳಿದ್ದು, ನಂತರ ಕಾವೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಪೊಲೀಸರು ಪ್ರಕರಣಕ್ಕೆ ಕುರಿತಂತೆ ಎಫ್ಐಆರ್ ದಾಖಲು ಮಾಡಿದ್ದು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
