5
ಪುತ್ತೂರು: ಗ್ಯಾಸ್ ಬಲೂನೊಂದು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಕಿಡಿ ಹೊತ್ತಿ ಕಾರು ಬೆಂಕಿಗಾಹುತಿಯಾದ ಘಟನೆ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ವಠಾರದಲ್ಲಿ ಜ.18 ರಂದು ನಡೆದಿದೆ.

ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಜಾತ್ರೋತ್ಸವ ಜರುಗುತ್ತಿದ್ದು, ಈ ಸಂದರ್ಭ ಬಲೂನ್ವೊಂದು ಗಾಳಿಯಲ್ಲಿ ಹಾರಿ ವಿದ್ಯುತ್ ತಂತಿಗೆ ತಾಗಿದೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಾಣಿಸಿಕೊಂಡ ಬೆಂಕಿ ಕಿಡಿಯೊಂದು ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಬಿದ್ದಿದೆ.
ಈ ವೇಳೆ ಕಾರು ತನ್ನಷ್ಟಕ್ಕೆ ಮುಂಭಾಗಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂದು ವರದಿಯಾಗಿದೆ.

