ಬೆಂಗಳೂರು: ʼಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದೂ ದೇವತೆಗಳ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಕುರಿತು ಝೀ ಟಿವಿ ತಂಡದ ವಿರುದ್ಧ ಅಸಮಾಧಾನವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.
ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಅನಿಸಿದ್ದೆಲ್ಲವನ್ನೂ ಮಾಡಬಹುದೇ? ದೇವರು, ಪೌರಾಣಿಕ ವ್ಯಕ್ತಿಗಳನ್ನು ನಿಷ್ಕ್ರಯೋಜಕರು ಎನ್ನುವ ರೀತಿಯಲ್ಲಿ ಬಿಂಬಿಸಬಹುದೇ? ಎಂದು ಕಟುವಾಗಿ ಪ್ರಶ್ನೆ ಮಾಡಿದೆ.
ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಚಿತ್ರಿಸಲಾಗಿದೆ ಎನ್ನುವ ಆರೋಪದಲ್ಲಿ ತಮ್ಮ ವಿರುದ್ಧ ದಾಖಲು ಮಾಡಲಾಗಿರುವ ಎಫ್ಐಆರ್ ರದ್ದುಗೊಳಿಸಲು ಕೋರಿ ಜೀ ಎಂಟರ್ ಪ್ರೈಸಸ್ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ.ಅನಿಲ್ ಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಕಾಮಿಡಿ ಎನ್ನುವುದು ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರಬಾರದು, ವಿಪರೀತಕ್ಕೂ ಹೋಗಬಾರದು. ಇಂತಹ ಧೋರಣೆ ತೋರಿರುವ ಅರ್ಜಿದಾರರಿಗೆ ಏಕೆ ಕರುಣೆ ತೋರಬೇಕು? ನ್ಯಾಯಾಲಯಗಳು ಹೆಚ್ಚು ಔದಾರ್ಯ ತೋರುತ್ತಿರುವ ಕಾರಣಗಳಿಂದಾಗಿಯೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.
ಅರ್ಜಿದಾರರ ಪರವಾಗಿ ವಕಿಲರು ಪ್ರಕರಣದ ವಿವರಣೆ ನೀಡಲು ಬಂದಾಗ, ದೇವರೆಂದು ಆರಾಧಿಸುವ ಕೃಷ್ಣನನ್ನು ನಿಮ್ಮ ಕಾರ್ಯಕ್ರಮದಲ್ಲಿ ಏನೆಂದು ಬಿಂಬಿಸಲಾಗಿದೆ? ಬಳಕೆ ಮಾಡಿರುವ ಪದಗಳು ಯಾವುದು? ಓದುವ ರೀತಿಯಲ್ಲಿ ಅವುಗಳು ಇದೆಯೇ? ದ್ರೌಪದಿಯನ್ನು ಯಾವ ರೀತಿ ಬಿಂಬಿಸಲಾಗಿದೆ? ಈ ರೀತಿಯ ಮನೋಭಾವ ಇರುವ ಆರೋಪಿಗಳನ್ನು ಏಕೆ ಸುಮ್ಮನೆ ಬಿಡಬೇಕು? ಹೋಗಿ ತನಿಖೆಯನ್ನು ಎದುರಿಸಿ. ತನಿಖೆಯಲ್ಲಿ ಭಾಗಿಯಾಗಲು ಭಯವೇ? ಕಾಮಿಡಿ ಮಾಡಲು ಇಲ್ಲದ ಭಯ ತನಿಖೆಯಲ್ಲಿ ಭಾಗಿಯಾಗಲು ಏಕೆ? ಹೋಗಿ ಜಾಮೀನು ಪಡೆದುಕೊಳ್ಳಿ ಎಂದು ಕಟುವಾಗಿ ಹೇಳಿದರು.















