ಬೆಂಗಳೂರು: ನರೇಗಾ ಯೋಜನೆ ಹೆಸರನ್ನು ಕೇಂದ್ರ ಸರಕಾರ ಬದಲಾಯಿಸಿರುವುದರ ವಿರುದ್ಧ ಕರ್ನಾಟಕ ಸರಕಾರ ಕರೆದಿರುವ ವಿಶೇಷ ಅಧಿವೇಶನ ಕೂಡಾ ಸರಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಥಾವರ್ಚಂದ್ರ ಗೆಹ್ಲೋಟ್ ವಿಧಾನಸಭೆಗೆ ಬಂದಿದ್ದು, ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ, ಶುಭಾಶಯ ತಿಳಿಸಿ ಸರಕಾರ ನೀಡಿದ ಭಾಷಣದ ಪ್ರತಿಯನ್ನು ಓದದೆ ತೆರಳಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ಈ ಸಮಯದಲ್ಲಿ ವಿಧಾನಸಭೆಯಲ್ಲಿ ಹೈಡ್ರಾಮವೇ ಉಂಟಾಯಿತು.
ಬುಧವಾರ ಸರಕಾರ ಸಿದ್ಧಪಡಿಸರುವ ಭಾಷಣದಲ್ಲಿ 11 ಅಂಶಗಳನ್ನು ತೆಗೆಯಲು ಸೂಚನೆ ನೀಡಿದ್ದರು. ಆದರೆ ಅದನ್ನು ಸರಕಾರ ನಿರಾಕರಣೆ ಮಾಡಿತ್ತು. ಆ ಕಾರಣದಿಂದ ರಾಜ್ಯಪಾಲರು ಭಾಷಣ ಮಾಡಲು ಬರುವುದು ಅನುಮಾನ ಎನ್ನಲಾಗಿತ್ತು. ಒಂದು ವೇಳೆ ರಾಜ್ಯಪಾಲರು ವಿಧಾನಸಭೆಗೆ ಬಾರದಿದ್ದರೆ ಕಾನೂನು ಕ್ರಮಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರಕಾರ ಸಿದ್ಧತೆ ಮಾಡಿತ್ತು.
ರಾಜ್ಯಪಾಲರು ನಿರ್ಗಮಿಸಲು ಮುಂದಾದಾಗ, ಅವರನ್ನು ತಡೆಯಲೆಂದು ಎಂಎಲ್ಸಿ ಬಿಕೆ ಹರಿಪ್ರಸಾದ್ ಮುಂದೆ ಬಂದರು. ಆ ಸಂದರ್ಭದಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕರು ಘೋಷಣೆಗಳನ್ನು ಕೂಗಿದರು. ನಂತರ ಸ್ಪೀಕರ್ ಯುಟಿ ಖಾದರ್, ಸಭಾಪತಿ ಹೊರಟ್ಟಿ, ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ಬೀಳ್ಕೊಟ್ಟರು.
ಹೊರಗೆ ಬಂದ ರಾಜ್ಯಪಾಲರು ಕಾರು ಹತ್ತಿದ ಕೂಡಲೇ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಸೇರಿ ಇತರರು ʼಸಂವಿಧಾನ ಧಿಕ್ಕರಿಸಿದ ರಾಜ್ಯಪಾಲರಿಗೆʼ ಎಂದು ಘೋಷಣೆಯನ್ನು ಕೂಗಿದರು. ಆಗ ಹೈಡ್ರಾಮವೇ ನಡೆಯಿತು.














