Home » ಪ್ರೊ ಕಬಡ್ಡಿ ಕದನ ಕಣದಲ್ಲಿ ಸಣ್ಣಗೆ ಹಬೆ ಏಳುತ್ತಿದೆ | ಚಿರತೆಗಳನ್ನು ತಮ್ಮ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತ ಟೀಮ್ ಓನರ್ಸ್ !

ಪ್ರೊ ಕಬಡ್ಡಿ ಕದನ ಕಣದಲ್ಲಿ ಸಣ್ಣಗೆ ಹಬೆ ಏಳುತ್ತಿದೆ | ಚಿರತೆಗಳನ್ನು ತಮ್ಮ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತ ಟೀಮ್ ಓನರ್ಸ್ !

by ಹೊಸಕನ್ನಡ
0 comments

ಕಬಡ್ಡಿಯ ಕದನ ಕಣ ಮತ್ತೆ ರಂಗೇರುತ್ತಿದೆ. ದೇಹವನ್ನು ಪ್ರಾಕ್ಟೀಸಿನ ಕುಲುಮೆಯಲ್ಲಿ ಕುದಿಸಿ ತಯಾರಿಸಿದ ಪುಟಿಯುವ ಯವ್ವನದ ಯುವಕರು ತೊಡೆ ತಟ್ಟಲು ಸಜ್ಜಾಗಿದ್ದಾರೆ. ಚಿರತೆಯ ವೇಗ, ಜಿಂಕೆಯ ಚುರುಕುತನ, ನೆಲಕ್ಕೆ ಕಚ್ಚಿ ಕಾದಾಡಬಲ್ಲ ಕಾಡ ಕೋಣದ ಹಠ ಮ್ಯಾಟ್ ಕಬಡ್ಡಿಯ ರಿಂಗಿನ ಒಳಗೆ ರಣ ಕಣ ಸೃಷ್ಟಿಸಲಿದೆ. ದೈಹಿಕ ಕ್ಷಮತೆಯ ಜೊತೆಗೆ, ಅಸಂಖ್ಯ ಮಾನಸಿಕ ಪ್ಯಾರಾ ಮೀಟರ್ ಗಳನ್ನು ಪ್ರದರ್ಶಿಸಿ ಆಡಬೇಕಿರುವ ಜಗತ್ತಿನ ಅತ್ಯಂತ ಬುದ್ದಿ ಪೂರ್ವಕ ಆಟ ಎಂದೇ ಪರಿಗಣಿಸಲ್ಪಟ್ಟಿರುವ ಕಬಡ್ಡಿ ಇದೇ ಬರುವ ಡಿಸೆಂಬರ್ ನಲ್ಲಿ ವೀಕ್ಷಕ ಸಮುದಾಯಕ್ಕೆ ರಸದೌತಣ ನೀಡಲಿದೆ.

ವೇದಿಕೆ ಸಿದ್ಧಗೊಂಡಿದೆ. ಲೈಟುಗಳು ಘಗಮಗಿಸುತ್ತ ಕಣ್ಣು ಕೋರೈಸುತ್ತಿವೆ. ಆಟಗಾರರು ತಮ್ಮ ಫೇವರಿಟ್ ಟೀಮ್ ಸೇರಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ದುಡ್ಡಿನ ಥೈಲಿಯ ಸ್ಪಾನ್ಸರ್ ಗಳು ನೆಚ್ಚಿನ ಆಟಗಾರನನ್ನು ತಮ್ಮ ಬಳಗಕ್ಕೆ ಸೆಳೆದುಕೊಳ್ಳಲು ದುಡ್ಡು ಖರ್ಚು ಮಾಡಲಿದ್ದಾರೆ.

ತಂಡವನ್ನು ಬಲ ಪಡಿಸುವ ಕನಸು ಹೊತ್ತುಕೊಂಡಿರುವ 12 ಫ್ರಾಂಚೈಸ್‌ ಗಳು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಹೊಸ ಆಟಗಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಲಿವೆ. ಆಟಗಾರರ ಹರಾಜು ಇಂದು ಮುಂಬೈಯಲ್ಲಿ ಆರಂಭಗೊಳ್ಳಲಿದೆ.

ಸ್ಥಳೀಯ ಆಟಗಾರರನ್ನು ಎ,ಬಿ,ಸಿ ಮತ್ತು ಡಿ ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ವಿಭಾಗದವರಿಗೆ ಗರಿಷ್ಠ ಮೂಲ ಬೆಲೆ ₹30 ಲಕ್ಷ ಸಿಗಲಿದೆ. ‘ಬಿ’ ವಿಭಾಗದವರಿಗೆ ₹20 ಲಕ್ಷ, ‘ಸಿ’ ವಿಭಾಗದವರಿಗೆ ₹10 ಲಕ್ಷ ಮತ್ತು ‘ಡಿ’ ವಿಭಾಗದವರಿಗೆ ₹6 ಲಕ್ಷ ಸಿಗಲಿದೆ.

ಪ್ರತಿ ತಂಡಕ್ಕೆ 4.4 ಕೋಟಿ ರೂ. ಬಜೆಟ್ ಪ್ರತಿ ತಂಡಕ್ಕೂ ಆಟಗಾರರನ್ನು ಕೊಂಡುಕೊಳ್ಳಲು ಗರಿಷ್ಠ 4.4 ಕೋಟಿ ರೂಪಾಯಿ ಬಜೆಟ್ ನಿಗದಿಪಡಿಸಲಾಗಿದೆ. 12 ತಂಡಗಳಿಂದ 300 ಆಟಗಾರರಿಗೆ ಅವಕಾಶ ಲಭಿಸುತ್ತದೆ. ಪ್ರತಿ ತಂಡಗಳು ಕನಿಷ್ಠ 18 ಗರಿಷ್ಠ 25 ಆಟಗಾರರನ್ನು ಕೊಂಡುಕೊಳ್ಳಬಹುದು. ಪ್ರತಿ ತಂಡದಲ್ಲಿ ಕನಿಷ್ಠ ಇಬ್ಬರು ವಿದೇಶಿ ಆಟಗಾರರು ಇರಬೇಕು. ಗರಿಷ್ಠ ನಾಲ್ವರನ್ನು ಖರೀದಿಸಲು ಮಾತ್ರ ಅವಕಾಶವಿದೆ. ಹೊಸ ಯುವ ಆಟಗಾರರ ಪಟ್ಟಿಯಲ್ಲಿ ಸೇರದ, ಈಗಾಗಲೇ ತಂಡದಲ್ಲಿ ಇರುವ ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸ್‌ಗಳಿಗೆ ಅವಕಾಶವಿದೆ.

ಟೂರ್ನಿ ಇತಿಹಾಸದಲ್ಲಿ ಗರಿಷ್ಠ ಅಂಕ ಕಲೆಹಾಕಿರುವ ರೈಡರ್ ಪ್ರದೀಪ್ ನರ್ವಾಲ್ ಭಾನುವಾರದಿಂದ ನಡೆಯಲಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ. ಸ್ಟಾರ್ ಆಟಗಾರರಾದ ರೋಹಿತ್ ಕುಮಾರ್, ರಾಹುಲ್ ಚೌಧರಿ, ಅಜಯ್ ಠಾಕೂರ್, ದೀಪಕ್ ನಿವಾಸ ಹೂಡಾ, ನಿತೀಶ್ ಕುಮಾರ್ ಸಹಿತ ಪ್ರಮುಖ ಆಟಗಾರರನ್ನು ಕೊಂಡುಕೊಳ್ಳಲು 12 ಫ್ರಾಂಚೈಸಿಗಳು ಪೈಪೋಟಿ ನಡೆಯಲಿದೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿ 450ಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶಿ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಕೇವಲ ಉದಯೋನ್ಮುಖ ಆಟಗಾರರ ಹರಾಜು ನಡೆಯಲಿದೆ.

ಪ್ರಕ್ರಿಯೆಯಲ್ಲಿ ಕರ್ನಾಟಕದಿಂದ 38 ಮಂದಿ ಪಾಲ್ಗೊಳ್ಳಲಿದ್ದಾರೆ. ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಪ್ರತಿನಿಧಿಸಿದ್ದ ಸುಖೇಶ್ ಹೆಗ್ಡೆ, ಪ್ರಶಾಂತ್ ಕುಮಾರ್ ರೈ, ಜೀವಕುಮಾರ್, ಶಬ್ಬಿರ್ ಬಾಪು, ರಕ್ಷಿತ್, ದರ್ಶನ್ ಕಣದಲ್ಲಿರುವ ಪ್ರಮುಖ ಆಟಗಾರರು. ಕರ್ನಾಟಕದ ಆಟಗಾರ ರಾಕೇಶ್ ಗೌಡ ಅವರನ್ನು ತೆಲುಗು ಟೈಟಾನ್ಸ್ ರಿಟೇನ್ ಮಾಡಿಕೊಂಡಿದ್ದು, ಪಿಕೆಎಲ್‌ನಲ್ಲಿ ರಿಟೇನ್ ಆಗಿರುವ ಕರ್ನಾಟಕದ ಏಕೈಕ ಆಟಗಾರನಾಗಿದ್ದಾರೆ.

You may also like

Leave a Comment