ಪುತ್ತೂರು:ಸಂಯುಕ್ತ ಖಾಝಿ ನೇಮಕ ವಿಚಾರದಲ್ಲಿ ಮಸೀದಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚೆ ನಡೆದು , ನೂಕುನುಗ್ಗಲು ನಡೆದಿರುವ ಘಟನೆ ಇಲ್ಲಿನ ಮಸೀದಿಯೊಂದರಲ್ಲಿ ನಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರು ತಾಲೂಕಿನ ಸಂಯುಕ್ತ ಖಾಝಿ ನೇಮಕದ ಕುರಿತು ಚರ್ಚಿಸುವ ಉದ್ದೇಶದಿಂದ ಅ.15ರಂದು ಇಲ್ಲಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು.
ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಸಭೆ ನಡೆಯಿತು.ಸಮಸ್ತದ ಅಧ್ಯಕ್ಷ ಅಸಯ್ಯದ್ ಸಯ್ಯದುನಾ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ತಂಬಳ ಅವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ಅ.29ರಂದು ನೇಮಕಗೊಳಿಸುವ ಕುರಿತು ಈಗಾಗಲೇ ಹಲವು ಜಮಾಅತ್ಗಳು ತೀರ್ಮಾನಿಸಿರುವ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಾಲ್ಮರ ಶರೀಫ್ ಎಂಬವರು ಆಕ್ಷೇಪಿಸಿ ಅಧ್ಯಕ್ಷರನ್ನು ತರಾಟೆಗೆತ್ತಿಕೊಳ್ಳಲು ಮುಂದಾದರು.
ಈ ಸಂದರ್ಭ ಅಲ್ಲಿದ್ದ ಜಮಾಅತ್ನ ಕೆಲವರು ಆಕ್ಷೇಪಿಸಿ ಶರೀಫ್ ಅವರನ್ನು ತರಾಟೆಗೆತ್ತಿಕೊಂಡಾಗ ಚರ್ಚೆ, ಚಕಮಕಿ ನಡೆದು ಹೊಕೈ, ನೂಕುನುಗ್ಗಲು ನಡೆಯಿತು. ಸೇರಿದ್ದ ಪ್ರಮುಖರು ರಾಜಿ ಮಾತುಕತೆ ನಡೆಸಿ ಬಳಿಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ವರದಿಯಾಗಿದೆ.ಆದರೆ ಮಸೀದಿಯಲ್ಲಿ ನಡೆದ ಈ ಹೊಯ್ ಕೈ, ನೂಕುನುಗ್ಗಲಿನ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

