ಕಾರ್ಕಳ: ಕಾಶ್ಮೀರ ಆಪಲ್ ಗಳನ್ನು ಮಂಗಳೂರಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಯು ಬುಧವಾರ ಮುಂಜಾನೆ ವೇಳೆಗೆ ಕುದುರೆಮುಖ ಮಾಳಘಾಟಿಯಲ್ಲಿ ಅಗ್ನಿಗಾಹುತಿಯಾಗಿದೆ.
ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಲಾರಿಯ ಹಿಂದಿನ ಚಕ್ರ ಸ್ಫೋಟಗೊಂಡು ತಿಕ್ಕಾಟ ಸಂಭವಿಸಿ ಬೆಂಕಿ ಆವರಿಸಿಕೊಂಡಿತು. ಟೈರ್ ಗೆ ಮೊದಲು ಕ್ಷಣಾರ್ಧದಲ್ಲಿ ಇಡೀ ಲಾರಿಗೆ ಆವರಿಸಿದೆ. ರಾತ್ರಿಯಲ್ಲಿ ಘಾಟಿ ರಸ್ತೆಯಲ್ಲಿ ಸಂಭವಿಸಿದ ಈ ಘಟನೆಯಿಂದ ಕೆಲತಾಸು ಆತಂಕದ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಸರಕು ಸಂಪೂರ್ಣ ನಾಶವಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಎಚ್ಚೆತ್ತ ಲಾರಿಯ ಚಾಲಕ ಹಾಗೂ ಸಹಾಯಕರು ತತ್ಕ್ಷಣ ವಾಹನದಿಂದ ಹೊರಬಂದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಅಗ್ನಿ ಅವಘಡ ಮಾಹಿತಿ ದೊರಕುತ್ತಿದ್ದಂತೆ ಕಾರ್ಕಳದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಶ್ರಮದ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ಸಿಬಂದಿಗಳಾದ ಅಚ್ಯುತ ಕರ್ಕೇರ, ಹರಿಪ್ರಸಾದ್ ಶೆಟ್ಟಿಗಾರ್, ದಿನೇಶ್, ಮಹಮ್ಮದ್ ಮುಝಾಂಬಿಲ್ ಮತ್ತು ನಿತ್ಯಾನಂದ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
