Home » ಹೊಸ ವರ್ಷದ ಹೊಸ್ತಿಲಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೊಸ ಸಾರಥ್ಯ! ಇವರೇ ನೋಡಿ ಹೊಸ ವ್ಯವಸ್ಥಾಪಕ ನಿರ್ದೇಶಕರು

ಹೊಸ ವರ್ಷದ ಹೊಸ್ತಿಲಲ್ಲಿ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಹೊಸ ಸಾರಥ್ಯ! ಇವರೇ ನೋಡಿ ಹೊಸ ವ್ಯವಸ್ಥಾಪಕ ನಿರ್ದೇಶಕರು

0 comments

ಹೊಸ ವರ್ಷದ ಹೊಸ್ತಿಲಲ್ಲಿ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾರಥ್ಯವನ್ನು ನಾಲ್ವರು ಹೊಸಬರು ವಹಿಸುವ ಸಾಧ್ಯತೆ ದಟ್ಟವಾಗಿದೆ. 2023ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಹೊಸಬರ ನೇಮಕವಾಗುವ ನಿರೀಕ್ಷೆ ಇದೆ. ಯಾವ ಯಾವ ಬ್ಯಾಂಕ್ ಗಳಿಗೆ ಯಾರು ನೇಮಕವಾಗಲಿದ್ದಾರೆ ಎಂಬ ಕುತೂಹಲ ಇದೆಯಾ? ಹಾಗಾದರೆ ಈ ಸ್ಟೋರಿ ಓದಿ.

ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇಂಡಿಯನ್ ಓವರ್​ಸೀಸ್ ಬ್ಯಾಂಕ್ ಮತ್ತು ಬ್ಯಾಂಕ್​ ಆಫ್ ಇಂಡಿಯಾದ ಪ್ರಮುಖ ಹೊಣೆಗಾರಿಕೆಯನ್ನು ಹೊಸಬರು ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್​ಬಿಐ ಅಧ್ಯಕ್ಷ ದಿನೇಶ್ ಖರಾ ಅವರ ಅವಧಿ ಅಕ್ಟೋಬರ್ ಆರಂಭದಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಅಕ್ಟೋಬರ್ ಮೊದಲ ವಾರ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಇದಕ್ಕೂ ಮೊದಲು ಅವರು ಎಸ್​ಬಿಐ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸದ್ಯ ನಾಲ್ಕು ವ್ಯವಸ್ಥಾಪಕ ನಿರ್ದೇಶಕರಿದ್ದು, ಅದರಲ್ಲಿ ಸಿಎಸ್ ಶೆಟ್ಟಿ ಹಿರಿಯರಾಗಿದ್ದಾರೆ. ಅವರೇ ಮುಂದೆ ನಿರ್ದೇಶಕರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಪಾರ್ಥ ಪ್ರತಿಮ್ ಸೇನ್​ಗುಪ್ತಾ ಕೂಡ ಇಂದು ಅಂದರೆ ಡಿಸೆಂಬರ್ 31, 2022 ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ ಜನವರಿಯಲ್ಲಿ ನಿವೃತ್ತರಾಗುತ್ತಿದ್ದಾರೆ. ಬ್ಯಾಂಕ್​ ಆಫ್ ಇಂಡಿಯಾದ ಎಂಡಿ, ಸಿಇಒ ಎಕೆ ದಾಸ್ 2023ರ ಜನವರಿ 20ರಂದು ಸೇವೆಯಿಂದ ನಿವೃತ್ತರಾಗುತ್ತಾರೆ.

ಎಲ್​ಐಸಿ ಅಧ್ಯಕ್ಷ ಎಂಆರ್ ಕುಮಾರ್ ಅವರ ಅವಧಿ 2023ರ ಮಾರ್ಚ್​ಗೆ ಕೊನೆಗೊಳ್ಳಲಿದೆ. ಇವರು 2019ರಲ್ಲಿ ನೇಮಕವಾಗಿದ್ದರು. ಈ ವರ್ಷ ಎಲ್​ಐಸಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಇದ್ದುದರಿಂದ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಎಲ್​ಐಸಿಯ ಮತ್ತೊಬ್ಬ ಎಂಡಿ ರಾಜ್​ಕುಮಾರ್ ಅವರ ಅವಧಿಯೂ 2023ರಲ್ಲಿ ಕೊನೆಗೊಳ್ಳಲಿದೆ. ಮತ್ತೊಬ್ಬ ಎಂಡಿ ಬಿ.ಸಿ. ಪಟ್ನಾಯಕ್ ಮಾರ್ಚ್ 31ಕ್ಕೆ ನಿವೃತ್ತರಾಗಲಿದ್ದಾರೆ. ಸಿಇಒ ಸೋಮ ಶಂಕರ್ ಪ್ರಸಾದ್​ಗೆ ಮೇ ತಿಂಗಳಲ್ಲಿ 60 ವರ್ಷವಾಗಲಿದೆ. ಹೀಗಾಗಿ ಹೊಸ ಸಿಇಒ ನೇಮಕದ ಅನಿವಾರ್ಯತೆಯೂ ಎದುರಾಗಲಿದೆ.

ಕೆನರಾ ಬ್ಯಾಂಕ್ ಎಂಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಎಲ್​ವಿ ಪ್ರಭಾಕರ್ ಅವರ ಅಧಿಕಾರಾವಧಿ ಇಂದು ಡಿಸೆಂಬರ್ 31, 2022 ಕೊನೆಗೊಳ್ಳುತ್ತಿದೆ. ಇವರ ಸ್ಥಾನಕ್ಕೆ ಹಣಕಾಸು ಸೇವೆಗಳ ಸಾಂಸ್ಥಿಕ ಮಂಡಳಿಯು ಕೆ. ಸತ್ಯನಾರಾಯಣ ರಾಜು ಅವರನ್ನು ಶಿಫಾರಸು ಮಾಡಿದೆ. ಇವರು ಸದ್ಯ ಬ್ಯಾಂಕ್​ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

You may also like

Leave a Comment