Sudeep : ಮಾರ್ಕ್ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ‘ನಾವು ಮಾತಿಗೆ ಬದ್ದ, ನೀವು ಯುದ್ಧಕ್ಕೆ ಸಿದ್ಧವೇ’ ಎನ್ನುವುದರ ಮುಖಾಂತರ ಕಿಚ್ಚ ಸುದೀಪ್ ಯಾರಿಗೋ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಇದು ದರ್ಶನ ಅಭಿಮಾನಿಗಳಿಗೆ ಹೇಳಿದ ಮಾತು ಎಂಬಂತೆ ಅನೇಕರು ಬಿಂಬಿಸಲಾಗಿತ್ತು. ಅಲ್ಲದೆ ದಾವಣಗೆರೆಯಲ್ಲಿ ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಕೂಡ ತಮ್ಮದೇ ದಾಟಿಯಲ್ಲಿ ‘ಕೆಲವರು ದರ್ಶನ್ ಹೊರಗಡೆ ಇದ್ದಾಗ ಸುಮ್ಮನೆ ಇರುತ್ತಾರೆ. ಜೈಲಿಗೆ ಹೋದಾಗ ವೇದಿಕೆ ಮೇಲೆ ಏನೇನು ಮಾತನಾಡುತ್ತಾರೆ’ ಎಂದು ಟಾಂಗ್ ನೀಡಿದ್ದರು. ಆದರೆ ಇದೀಗ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ ಹಾಗೂ ಪರಮಾಪ್ತ ಆಗಿರುವ ಚಕ್ರವರ್ತಿ ಚಂದ್ರಚೂಡ್ ಅವರು ಸುದೀಪ್ ಅವರ ಮಾತಿನ ಅರ್ಥವೇನು ಎಂಬುದನ್ನು ವಿವರಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ಅವರು ವಿಡಿಯೋ ಮೂಲಕ ಕಿಚ್ಚ ಸುದೀಪ್ ಅವರ ಹೇಳಿಕೆಗಳ ಕುರಿತು ಕ್ಲಾರಿಟಿ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ‘ಸುದೀಪ್ ಹೇಳಿಕೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್, ಸ್ಟಾರ್ ವಾರ್ ನಡೀತಾ ಇದೆ ಎಂದು ಹೇಳುತ್ತಾ ಇದಾರೆ. ಮತ್ತೊಂದು ಪಡೆಗೆ ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ. ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರ ರೀತಿ ವರ್ತಿಸುತ್ತದೆ. ಸುದೀಪ್ ಸೇರಿದಂತೆ ಎಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ. ಸುದೀಪ್ ಅವರು ಹೇಳಿದ್ದು ಇದನ್ನೇ’ ಎಂದಿದ್ದಾರೆ.
ಅಲ್ಲದೆ ಪೈರಸಿ ಮಾಡಲು 22ಕ್ಕೂ ಹೆಚ್ಚು ಆ್ಯಪ್ಗಳು ಇವೆ. ಕ್ಷಣಮಾತ್ರದಲ್ಲಿ ಸಿನಿಮಾ ಡೌನ್ಲೋಡ್ ಆಗುತ್ತದೆ. ಮೊದಲ ಶೋ ಮುಗಿಯುತ್ತಿದ್ದಂತೆ ಸಿನಿಮಾ ಲೀಕ್ ಆಗುತ್ತದೆ. ಮ್ಯಾಕ್ಸ್ ಸಿನಿಮಾ ಸಂದರ್ಭದಲ್ಲಿ ಸಾವಿರಾರು ಲಿಂಕ್ಗಳನ್ನು ನಾನು ಡಿಲೀಟ್ ಮಾಡಿಸಿದ್ದೇನೆ. ಸಿನಿಮಾನ ಕಷ್ಟಪಟ್ಟು ಮಾಡಬೇಕು. ಸಿನಿಮಾ ರಿಲೀಸ್ ಆದಮೇಲೆಯೂ ಯುದ್ಧ ಮಾಡೋದು ಕಲಾ ಲೋಕಕ್ಕೆ ಬಂದ ಶಾಪ. ಇದರ ವಿರುದ್ಧ ಸಿಎಂ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ.
ಇಷ್ಟು ಮಾತ್ರವಲ್ಲದೆ ‘ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ ಎಲ್ಲರೂ ಸಿನಿಮಾನ ಅಥವಾ ಆ ಕೃತಿಯನ್ನು ವಿಮರ್ಶೆ ಮಾಡುವ ಹಕ್ಕಿರುತ್ತದೆ. ಆದರೆ, ವಿಮರ್ಶೆ ಹೆಸರಲ್ಲಿ ಸಿನಿಮಾನ ಸಾಯಿಸಲಾಗುತ್ತಿದೆ. ಇದಕ್ಕೆ ಒಂದು ಪಡೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹರಿಬಿಡಲು ಒಂದು ಪಡೆ ಇದೆ. ಈ ರೀತಿಯ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದು ತಪ್ಪಾ? ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಳ್ಳಬಾರದು. ಪೈರಸಿ ಎಂಬುದು 45, ಮಾರ್ಕ್ಗೆ ಇರುವ ಸವಾಲು. ಡೆವಿಲ್ ಸಿನಿಮಾಗೂ ಇದೇ ಸಮಸ್ಯೆ ಇದೆ. ಅವರಿಗೂ ಪೈರಸಿ ಕಾಟ ತಟ್ಟಿದೆ. ಸುದೀಪ್ ಅವರು ಎಂದಿಗೂ ಒಳ್ಳೆಯದನ್ನು ಬಯಸಿದ್ದಾರೆ’ ಎಂದಿದ್ದಾರೆ.
