Abhishek – Aviva marriage: ಬೆಂಗಳೂರಿನಲ್ಲಿ (Bangalore) ಅತಿ ವೈಭವದಿಂದ ಹಸೆಮಣೆಗೇರಿದ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ(Abhishek ambrish- Aviva biddappa) ದಂಪತಿ ಇಂದು ಮಂಡ್ಯದ ಜನತೆಗಾಗಿ ಗೆಜ್ಜೆಗೆರೆಯಲ್ಲಿ ಬೀಗರ ಊಟಕ್ಕೆ ಏರ್ಪಾಡು ಮಾಡಿದ್ದರು. ಸಸ್ಯಾಹಾರಿ, ಮಾಂಸಹಾರಿ ಎಂದು ವಿವಿಧ ಖಾದ್ಯಗಳ, ಭಕ್ಷಗಳ ಅಡುಗೆಗಳ ವೈವಿಧ್ಯ ತಯಾರಾಗಿತ್ತು. ಸುಮಾರು 60 ಸಾವಿರ ಜನರಿಗೆ ಊಟದ ಏರ್ಪಾಡು ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಕೆಲವು ಗೊಂದಲಗಳು ಉಂಟಾಗಿದ್ದಾವೆ.
ಹೌದು, ಅಭಿಷೇಕ್ ಹಾಗೂ ಅವಿವಾ (Abhishek – Aviva marriage) ಬೀಗರ ಔತಣ ಕೂಟಕ್ಕೆ ಸಾವಿರಾರು ಜನ ಒಮ್ಮೆಯೇ ಮುಗಿಬಿದ್ದರು. ಅಲ್ಲಿ ಹಾಕಿದ್ದ ಬ್ಯಾರಿಕೇಟ್ ಕಿತ್ತೊಗೆದು ಊಟ ಹಾಕುತ್ತಿದದ ಜಾಗಕ್ಕೆ ಜನ ನುಗ್ಗಿದ್ದಾರೆ. ಊಟ ಬಡಿಸಲೂ ಜಾಗ ಬಿಡದೆ ಅಲ್ಲಿಗೆ ಜನ ನುಗ್ಗಿದ ಪರಿಣಾಮ ಊಟ ಬಡಿಸುವುದು ನಿಧಾನವಾಯಿತು. ಬಳಿಕ ಅರ್ಧ ಗಂಟೆ ಕಾದ ಜನ ಕೊನೆಗೆ ಅಡುಗೆ ಮಾಡುತ್ತಿದ್ದ ಜಾಗಕ್ಕೆ ನುಗ್ಗಿದ್ದಾರೆ. ಪಾತ್ರೆಗಳಿಗೆ ಕೈ ಹಾಕಿ ಮಟನ್(Mutton), ಚಿಕನ್(Chikken) ತುಂಬಿಕೊಂಡು ತಿನ್ನಲಾರಂಭಿಸಿದ್ದಾರೆ. ಎಷ್ಟೇ ಮನವಿ ಮಾಡಿದ್ರೂ ಜಗ್ಗದೆ ಎಲೆಗೆ ಬಿರಿಯಾನಿ, ಬೋಟಿ ಗೊಜ್ಜು, ಚಿಕನ್ ಹಾಕಿಕೊಂಡು ತಿಂದಿದ್ದಾರೆ.
ಊಟದ ಮನೆಗೆ ಜನ ನುಗ್ಗಿದ್ರಿಂದ ದಿಕ್ಕು ತೋಚದೆ ಬಾಣಸಿಗರು ಸುಮ್ಮನೆ ನಿಂತಿದ್ದರು. ಊಟ ಬಡಿಸಲು ಬಿಡದೆ ತಮಗೆ ಬೇಕಾದಷ್ಟು ಎಲೆ, ಪ್ಲೇಟ್ ಗಳಿಗೆ ತುಂಬಿಕೊಂಡು ಅಡುಗೆ ಮಾಡುತ್ತಿದ್ದ ಜಾಗದಲ್ಲೇ ತಿನ್ನಲಾರಂಭಿಸಿದ್ದಾರೆ. ಕೆಲವರು ಮಾಡಿದ ತಪ್ಪಿಗೆ ಸಾವಿರಾರು ಜನರು ಊಟ ಮಾಡದೇ ವಾಪಸ್ಸಾಗುವಂತ ದುಸ್ಥಿತಿ ಎದುರಾಯಿತು.ಬೇಸರದಲ್ಲೇ ಮನೆಗಳತ್ತ ಹೊರಟರು. ಅಲ್ಲದೇ ಉಸ್ತುವಾರಿ ಹೊಣೆ ಹೊತ್ತವರು ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಸೂಕ್ತ ವ್ಯವಸ್ಥೆ ಮಾಡಲಾಗದಿದ್ದರೆ, ನೀರು ಕೊಡಲೂ ಸಾಧ್ಯವಾಗದಿದ್ದರೆ ಯಾಕೆ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಒಂದೇ ಕಡೆ ಕಾರ್ಯಕ್ರಮ ಆಯೋಜಿಸಿರುವುದರಿಂದ ಗೊಂದಲವಾಗಿದೆ. ಇದನ್ನು ಮೂರ್ನಾಲ್ಕು ಕಡೆ ಹಂಚಿ ಆಯೋಜಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಗೆಜ್ಜಲಗೆರೆ, ಮಳವಳ್ಳಿಗಳಲ್ಲಿ ಔತಣ ಕೂಟ ಏರ್ಪಡಿಸಿದ್ದರೆ ಹೀಗೆ ಒಮ್ಮೆಲೆ ಜನ ಮುಗಿಬಿದ್ದು ಸಮಸ್ಯೆಗಳಾಗುತ್ತಿರಲಿಲ್ಲ. ಇಲ್ಲಿ ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡವರು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇದರಲ್ಲಿ ಸುಮಲತಾ ಮೇಡಂ ಅವರದ್ದು ಯಾವುದೇ ತಪ್ಪಿಲ್ಲ” ಎಂದು ಅಂಬರೀಶ್ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಇನ್ನು ಇದಲ್ಲದೆ ಮದುವೆಯ ಈ ಬೀಗರೂಟದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಬೀಗರೂಟ (Beegaruta) ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಅಭಿಷೇಕ್ (Abhishek) ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿದ್ದಾರೆ.
ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ನಿಮ್ಮನ್ನು ನೋಡಲು ಬಂದೆ ಅನ್ನೋರು ಇದ್ರು. ಊಟ ಮಿಸ್ ಆಗಿದ್ದಕ್ಕೆ ಬೇಜಾರಾಗಿದೆ. ರಾಜಕೀಯ ವಿರೋಧಿಗಳು ಇದನ್ನು ಬಳಸಿಕೊಂಡರೆ ಅವರಿಗೂ ಒಳ್ಳೆಯದು ಆಗಲಿ. ಊಟ ಶಾರ್ಟೇಜ್ ಅನ್ನೋದು ಸುಳ್ಳು. ಊಟ ಉಳಿದಿದೆ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ ಎಂದಿದ್ದಾರೆ.
