Crime News: ಬಟ್ಟೆ ಗಲೀಜು ಆಗುತ್ತೆ ಎಂದು ಬೆತ್ತಲೆಯಾಗಿ ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆಯನ್ನು ಕೊರೆದು 85 ಮೊಬೈಲ್ ದೋಚಿದ್ದ ಖದೀಮನೊಬ್ಬ ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಅರಕೆರೆ ನಿವಾಸಿ ಇಕ್ರಂ ಉಲ್ ಹಸನ್ ಬಂಧಿತ ವ್ಯಕ್ತಿ.
ಈತನಿಂದ ಕಳವು ಮಾಡಲಾಗಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ. ಮೇ 9 ರ ತಡರಾತ್ರಿ ಹೊಂಗಸಂದ್ರ ಬಳಿಯ ದಿನೇಶ್ ಎಂಬಾತನಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ನಲ್ಲಿ ಕಳ್ಳತನ ಮಾಡಲು ಈತ ಬೆತ್ತಲೆಯಾಗಿ ಹೋಗಿದ್ದು, ಈತನ ಕುರಿತು ತನಿಖೆಗಿಳಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಹಸನ್ ಅಸ್ಸಾಂ ರಾಜ್ಯದವನಾಗಿದ್ದು. ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಬಂದಿದ್ದು, ಅರಕೆರೆಯಲ್ಲಿ ನೆಲೆಸಿದ್ದನು. ಸೆಂಟ್ರಲ್ ಮಾಲ್ನಲ್ಲಿ ಕೆಲಸಕ್ಕಿದ್ದ ಈತ ನಂತರ ಇನ್ನೊಂದು ಮಳಿಗೆಯಲ್ಲಿ ಸ್ವಚ್ಛತಾ ಕೆಲಸಕ್ಕೆ ಸೇರಿಕೊಂಡಿದ್ದ. ಸುಲಭ ಹಣ ಸಂಪಾದನೆಗೆಂದು ಕಳ್ಳತನಕ್ಕಿಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈತ ವಿವಿಧ ಕಂಪನಿಗಳ ಲಕ್ಷಾಂತರ ಮೌಲ್ಯದ 87 ಮೊಬೈಲ್ಗಳು ಕದ್ದು ಪರಾರಿಯಾಗಿದ್ದ. ಮಳಿಗೆ ಮಾಲಿಕನ ದೂರಿನ ಆಧಾರದ ಮೇಲೆ ತನಿಖೆ ಮಾಡಲಾಗಿದ್ದು, ಆರೋಪಿಯ ಬಂಧನವಾಗಿದೆ. ಕಳ್ಳತನದ ವೇಳೆ ಬಟ್ಟೆ ಗಲೀಜಾಗುತ್ತದೆ ಎಂಬ ಕಾರಣಕ್ಕೆ ವಿವಸ್ತ್ರವಾಗಿ ಹೋಗಿ ಕಳ್ಳತನ ಮಾಡಿರುವುದಾಗಿ ಆರೋಪಿ ವಿಚಾರಣೆ ಸಂದರ್ಭ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.
