ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಸರಕಾರಿ ಉರ್ದು ಶಾಲೆಯಲ್ಲಿ ಅತಿಥಿ ಶಿಕ್ಷಕಿಯೊಬ್ಬರು ಪುಟ್ಟ ಬಾಲಕನಿಗೆ ವೈರ್ನಿಂದ ಮನಬಂದಂತೆ ಥಳಿಸಿ ಅಮಾನವೀಯವಾಗಿ ವರ್ತನೆ ಮಾಡಿರುವ ಘಟನೆ ನಡೆದಿದೆ.
ಗಲಗ ಗ್ರಾಮದ ಸರಕಾರಿ ಉರ್ದು ಶಾಲೆಯಲ್ಲಿ 3 ನೇ ತರಗತಿ ಓದುತ್ತಿರುವ ಬಾಲಕನ ಮೇಲೆ ಹಲ್ಲೆ ನಡೆದಿದೆ. ಅತಿಥಿ ಶಿಕ್ಷಕಿ ಹರ್ಷಿಯಾ ತಸ್ಕಿನ್ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸರಿಯಾಗಿ ಬಾಲಕ ಓದಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಶಿಕ್ಷಕಿ ಕೈಗೆ ಸಿಕ್ಕ ವೈರ್ನಿಂದ ಬಾಲಕನ ಮೈತುಂಬಾ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ.
ಬಾಲಕನ ಬೆನ್ನು, ಕೈ ಮತ್ತು ಕಾಲುಗಳ ಮೇಲೆ ತೀವ್ರವಾದ ಗಾಯಗಳಾಗಿದ್ದು, ರಕ್ತ ಹೆಪ್ಪುಗಟ್ಟಿದ ಬಾಸುಂಡೆಗಳು ಬಂದಿದೆ. ನೋವಿನಿಂದ ನರಳುತ್ತಿದ್ದ ಬಾಲಕನನ್ನು ಕೂಡಲೇ ಗಲಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ತಮ್ಮ ಮಗನ ಮೈಮೇಲಿನ ಗಾಯಗಳನ್ನು ಕಂಡು ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಮುಂದೆ ಜಮಾಯಿಸಿ ಶಿಕ್ಷಕಿಯ ವಿರುದ್ಧ ಆಕ್ರೋಶ ಪಟ್ಟಿದ್ದಾರೆ.
