ಬೆಳ್ತಂಗಡಿ: ಸಾಲಕ್ಕೆ ಸಿಲುಕಿ ಅವಿವಾಹಿತ ಯುವಕನೋರ್ವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೇರ್ಹಳ್ಳಿ ಗ್ರಾಮದ ಅಭಿಷೇಕ್ (31) ಎಂಬಾತ ವಿಪರೀತ ಸಾಲ ಮಾಡಿಕೊಂಡ ಪರಿಣಾಮ ನೊಂದ ಯುವಕ ಮನೆಯಿಂದ ನಾಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನಗೆ ಸಾಲದ ಒತ್ತಡ ಜಾಸ್ತಿಯಾಗುತ್ತಿರುವ ಕಾರಣದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರಿಗೆ ಮೆಸೇಜ್ ಮಾಡಿದ್ದು, ನಂತರ ಕರೆ ಮಾಡಿ, ನಾನು ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಇದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದಾರೆ. ದೂರು ನೀಡಿದ ನಂತರ ನೇರ ಧರ್ಮಸ್ಥಳಕ್ಕೆ ಬಂದು ನೇತ್ರಾವತಿ ನದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
ಜ.11 ರಂದು ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಅಭಿಷೇಕ್ ಮೃತದೇಹ ಪತ್ತೆಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಹೋದರ ಭರತ್ ಬಿ.ಎಂ ಅವರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿರುವುದಾಗಿ ವರದಿಯಾಗಿದೆ.
