Mangalore: ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯ ಮುಸ್ಲಿಂ ಹೆಡ್ ಕಾನ್ಸ್ಟೇಬಲ್ ಕೈವಾಡವಿದೆ ಎಂಬ ಗಂಭೀರ ಆರೋಪವೊಂದು ಕೇಳಿ ಬಂದಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿದೆ.
ಆರಂಭದಿಂದಲೂ ಸುಹಾಸ್ ತಾಯಿ ಬಜಪೆ ಪೊಲೀಸರೇ ನಮ್ಮ ಮಗನನ್ನು ಸಾಯುವಂತೆ ಮಾಡಿದ್ದಾರೆಂದು ಹೇಳುತ್ತಿದ್ದರು. ಇದೀಗ ಹಲವಾರು ಸ್ಫೋಟಕ ವಿಚಾರಗಳು ಬಹಿರಂಗಗೊಳ್ಳುತ್ತಿದೆ.
ಸುಹಾಸ್ ಹತ್ಯೆಯಲ್ಲಿ ಬಜಪೆ (Bajpe) ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ರಶೀದ್ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ಹೆಚ್ಚಾಗಿದೆ. ಸುಹಾಸ್ ಶೆಟ್ಟಿ ಬಜಪೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ವ್ಯಾಪ್ತಿಗೆ ಬರುವ ಬಜಪೆ ಪೊಲೀಸ್ ಠಾಣೆ ಪೊಲೀಸರು ಆಗಾಗ ಸುಹಾಸ್ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದರು. ಅದರಲ್ಲೂ ಠಾಣೆಯ ಕಾನ್ಸ್ಟೇಬಲ್ ರಶೀದ್ ಪದೇ ಪದೇ ಕರೆದು ಸಾಕಷ್ಟು ಕಿರುಕುಳ ನೀಡುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ಕುಡುಪು ಎಂಬಲ್ಲಿ ಅಶ್ರಫ್ ಎಂಬಾತನ ಗುಂಪು ಹತ್ಯೆ ನಡೆದ ದಿನವೂ ರಶೀದ್ ಸುಹಾಸ್ ಶೆಟ್ಟಿಯನ್ನು ಬಜಪೆ ಠಾಣೆಗೆ ಕರೆಸಿ ನೀನು ಯಾವುದೇ ಮಾರಕಾಸ್ತ್ರಗಳನ್ನು ಇಡಬೇಡ, ನಿನ್ನ ಜೊತೆ ಯಾರೂ ಯುವಕರು ಇರಬಾರದು, ಹೆಚ್ಚಿಗೆ ಓಡಾಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಗಮನಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ರಶೀದ್ ಹಂತಕರಿಗೆ ಸುಹಾಸ್ ಬರುವ ಹಾಗೂ ನಿರಾಯುಧನಾಗಿ ಇದ್ದಾನೆ ಎನ್ನುವ ಮಾಹಿತಿ ನೀಡಿದ್ದಾರೆಂದು ವಿಎಚ್ಪಿ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ಆರೋಪ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ಮಾಧ್ಯಮ ವರದಿ ಮಾಡಿದೆ.
