ಬೆಳಗಾವಿ: ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷರ ಪುತ್ರಿ, ಖಾಸಗಿ ಶಾಲೆ ಶಿಕ್ಷಕಿಯೊಬ್ಬರು ಬಸ್ನಲ್ಲಿ ಸಹ ಪ್ರಯಾಣಿಕರ ಬ್ಯಾಗ್ನಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಲಕ್ಷ್ಮೀ ನಗರದ ನಿವಾಸಿ, ಶಿಕ್ಷಕಿ ಪದ್ಮಶ್ರೀ ಮಜಗಾವಿ ಬಂಧಿತ ಆರೋಪಿ.
ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದ ಅಕ್ಷತಾ ಕಣ್ಣೂರು ಹೈದರಾಬಾದ್ನಲ್ಲಿ ನೆಲೆಸಿದ್ದು ಸಂಕ್ರಾಂತಿ ಹಬ್ಬದ ಬುಧವಾರ ಬಸ್ನಲ್ಲಿ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು.
ಈ ವೇಳೆ ಅವರ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಲಾಗಿತ್ತು. ತಕ್ಷಣ ಅವರು ಪೊಲೀಸರ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮಾರ್ಗ ಮಧ್ಯ ಬಸ್ ತಡೆದು ನಿಲ್ಲಿಸಿ ಎಲ್ಲ ಪ್ರಯಾಣಿಕರ ತಪಾಸಣೆ ನಡೆಸಿದರು. ಈ ವೇಳೆ ಆರೋಪಿತ ಮಹಿಳೆ ಚಿನ್ನದ ಸರವನ್ನು ಯಾರಿಗೂ ಗೊತ್ತಾಗದಂತೆ ಬಸ್ ಕಿಟಕಿ ಮೂಲಕ ಹೊರಗೆ ಎಸೆದಿದ್ದರು. ಪೊಲೀಸರು ಬಸ್ನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಸರವನ್ನು ಹೊರಗೆ ಎಸೆದದ್ದು ಗೊತ್ತಾಗಿದೆ.
ವಿಚಾರಣೆ ವೇಳೆ ಸರ ಕಳ್ಳತನ ಮಾಡಿದ್ದನ್ನು ಶಿಕ್ಷಕಿ ಒಪ್ಪಿಕೊಂಡಿದ್ದಾರೆ. ಚಿನ್ನದ ಸರ ಪತ್ತೆ ಮಾಡಿ ಅಕ್ಷತಾ ಕಣ್ಣೂರು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
