3
Hassana: ಸಾಲದ ಶ್ಯೂರಿಟಿಗೆ ಸಹಿ ಹಾಕುವಂತೆ ದಂಪತಿ ಬೆದರಿಕೆ ಹಾಕಿದ್ದರಿಂದ ಮನನೊಂದ ಮಹಿಳೆಯೊಬ್ಬರು ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಬೇಲೂರಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ.
ಜಮುನಾ (44) ಮೃತ ಮಹಿಳೆ. 10 ಲಕ್ಷ ರೂ. ಸಾಲಕ್ಕೆ ಶ್ಯೂರಿಟಿ ಸಹಿ ಹಾಕಲು ಜಮುನಾ ಅವರನ್ನು ಸಂದೀಪ್, ಧನುಶ್ರೀ ದಂಪತಿ ಪದೇ ಪದೇ ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಜಮುನಾ ಒಪ್ಪಿರಲಿಲ್ಲ. ಮಗನನ್ನು ಕೊಲೆ ಮಾಡುವುದಾಗಿ ದಂಪತಿ ಬೆದರಿಕೆ ಹಾಕಿದ್ದರು ಎಂದು ಆರೋಪ ಮಾಡಲಾಗಿದೆ.
ಡೆತ್ನೋಟಲ್ಲಿ ಈ ವಿಚಾರ ಬರೆದಿಟ್ಟು ಜಮುನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೃತ ಜಮುನಾ ಅವರ ಪುತ್ರ ಸಾತ್ವಿಕ್ ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಸಾತ್ವಿಕ್ ತಂದೆ ಆರು ತಿಂಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದು, ಇದೀಗ ತಾಯಿ ಕಳೆದುಕೊಂಡು ಅನಾಥನಾಗಿದ್ದಾನೆ. ಅರೇಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
