Right to Education: ಇದೀಗ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಯ ಫೀಸ್ ಕಟ್ಟಿಲ್ಲ ಎಂದು ಮಕ್ಕಳನ್ನು ಶಾಲೆಯಿಂದ (Right to Education) ಹೊರಗಿಡಬಾರದು. ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡಾ. ಎಚ್.ಸಿ. ಮಹದೇವಪ್ಪ, “ಕಳೆದ ಸರ್ಕಾರದ ಅವಧಿಯಲ್ಲಿ ಬಡ ಮಕ್ಕಳು ಶಾಲೆಯ ಶುಲ್ಕ ಪಾವತಿಸದೇ ಇದ್ದಾಗ ಅವರಿಗೆ ಶಿಕ್ಷಣ ಪಡೆಯಲು ಅನುಮತಿ ಇರಲಿಲ್ಲ. ಆದರೆ ಶಿಕ್ಷಣ ಪ್ರಾಥಮಿಕವಾದ ಹಕ್ಕಾಗಿದೆ. ಶುಲ್ಕದ ನೆಪವೊಡ್ಡಿ ಯಾವುದೇ ವಿದ್ಯಾರ್ಥಿಗೂ ಕೂಡಾ ಶಿಕ್ಷಣದ ಸೌಲಭ್ಯವನ್ನು ವಂಚಿಸುವಂತಿಲ್ಲ. ಶುಲ್ಕದ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ನೀಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆಯ ಮಾತುಗಳನ್ನು ಬರೆದಿದ್ದಾರೆ.
“ಹಿಂದಿನ ಸರ್ಕಾರದ ಅರಾಜಕತೆಯನ್ನು ಖಂಡಿಸುತ್ತೇನೆ. ಅವರು ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಎಲ್ಲ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ಸಿಗುವಂತೆ ಶಿಸ್ತುಬದ್ಧವಾಗಿ ಕ್ರಮ ಕೈಗೊಂಡು ಎಲ್ಲಾ ಅಧಿಕಾರಿಗಳಿಗೂ ಸಹ ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು.
ವಿದ್ಯಾರ್ಥಿ ವೇತನದ ವಿಷಯದಲ್ಲಿ ಏನಾದರೂ ತೊಂದರೆಯಾದರೆ
ವಿದ್ಯಾರ್ಥಿಗಳು ನಮ್ಮ ಗಮನಕ್ಕೆ ತನ್ನಿ” ಎಂದು ಹೇಳಿದ್ದಾರೆ.
