Mysore University: ನಾಡಿಗೆ ಜ್ಞಾನವನ್ನು ಹಂಚುವ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ವಿವಾದಗಳೇ ಹೆಚ್ಚಾಗುತ್ತಿವೆ. ದಿನಂಪ್ರತಿ ಒಂದಾದರೂ ವಿವಿಯ ಕರ್ಮಕಾಂಡಗಳ ಹೊರ ಬರುತ್ತಿವೆ. ಅಂತೆಯೇ ಇದೀಗ ವಿಭಾಗದ ಮುಖ್ಯಸ್ಥರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ವಿಶ್ವ ವಿದ್ಯಾಲಯ(Mysore university)ಕುಲಸಚಿವರ(Register) ಕಚೇರಿ ಎದುರೇ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಹೌದು, ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿವಿಯ ಕುಲಸಚಿವರ ಕಚೇರಿ ಎದುರೇ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿವಿಯ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದಿದೆ.
ಏನಿದು ಘಟನೆ?
ಎಂಪಿಎಡ್(MPEd) ಅಂತಿಮ ವರ್ಷದ ವಿದ್ಯಾರ್ಥಿ ಕೆ.ಜೆ.ಗಗನ್(K J Gagan) ಎಂಬವರು ‘ದೈಹಿಕ ಶಿಕ್ಷಣ ಮುಖ್ಯಸ್ಥರ ಕಿರುಕುಳ ಕುರಿತು ಈಗಾಗಲೇ ದೂರು ನೀಡಿದ್ದರೂ ವಿವಿಯ ಆಡಳಿತ ಇನ್ನೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನು ಬದುಕಬಾರದು ಎಂದು ನಿರ್ಧರಿಸಿ, ಕುಲಸಚಿವರ ಕಚೇರಿ ಎದುರೇ ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ’ ಎಂದು ವಿಡಿಯೋವೊಂದನ್ನು ಮಾಡಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲದೆ ಇದರ ಬೆನ್ನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಮೈಸೂರು ವಿವಿ ಕುಲಸಚಿವೆ ವಿ.ಆರ್.ಶೈಲಜಾ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ವಿದ್ಯಾರ್ಥಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಸಮಿತಿ ರಚಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನೂ ಮುಖ್ಯಸ್ಥರು ಯಾಕಾಗಿ ಈ ಹುಡುಗನಿಗೆ ಹೀಗೆ ಮಾಡಿದರು, ಯಾವ ಮಾನಸಿಕ ಹಿಂಸೆ ನೀಡಿದರು ಎಂಬುದು ಇನ್ನು ತಿಳಿಯಬೇಕಿದೆ.
