Belagavi : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಶಕ್ತಿಯೋಜನೆಯಂತಹ ಬಸ್ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ್ದು, ಇತ್ತೀಚೆಗೆ ಬಸ್ಗಳಿಗೆ ವಿದ್ಯಾರ್ಥಿಗಳು ಕಲ್ಲೆಸೆದು ಗಾಜು ಒಡೆಯುವ ಪ್ರಕರಣ ಹೆಚ್ಚಾಗಿದೆ. ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಹೊರಟಿದ್ದ ಬಸ್ಗೆ ಕಲ್ಲೆಸದು ಗಾಜು ಒಡೆದು ಹಾಕಿರುವ ಘಟನೆ ನಡೆದಿದೆ. ನಯಾನಗರ ಗ್ರಾಮದ ವಿದ್ಯಾರ್ಥಿಗಳು ವಾಯುವ್ಯ ಸಾರಿಗೆ ಬಸ್ಗೆ ಕಲ್ಲೆಸೆದಿದ್ದಾರೆ.
ರಾಜ್ಯಾದ್ಯಂತ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಬಹುತೇಕ ಬಸ್ಗಳಲ್ಲಿ ಫುಲ್ ರಶ್ ಆಗುತ್ತಿದ್ದು, ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡುವುದು ಕೂಡಾ ಹೆಚ್ಚಾಗಿದೆ. ಇದರಿಂದ ಬಸ್ನಲ್ಲಿ ದಿನಾ ಶಾಲೆಗೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಸೀಟು ಸಿಗುತ್ತಿಲ್ಲ. ಇದರಿಂದ ಕೆಲ ವಿದ್ಯಾರ್ಥಿಗಳು ಬಸ್ನ ಚಾಲಕರು, ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸೇರಿದಂತೆ ವಿವಿದೆಡೆ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ನೀಡುವ ಸಾರಿಗೆ ಇಲಾಖೆಗಳ ಬಸ್ಗಳಲ್ಲಿ ಪ್ರಯಾಣಿಕರು ತುಂಬಿತುಳುಕುತ್ತಿದ್ದು, ಇದರಿಂದ ಬಸ್ನ ಚಾಲಕರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಬೇರೆ ಪ್ರಯಾಣಿಕರು ಕೈ ತೋರಿಸಿದರೂ ನಿಲ್ಲಿಸದೇ ಹೊರಟು ಹೋಗುತ್ತಿದ್ದಾರೆ. ಇದರಿಂದ ಶಾಲೆ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸರಕಾರದ ಈ ಯೋಜನೆ ವಿರುದ್ಧ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಬಸ್ ನಿಲ್ಲಿಸದೆ ಮುಂದೆ ಹೋದಾಗ ಹಿಂದಿನ ಗಾಜಿಗೆ ಕಲ್ಲು ಎಸೆದು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಿಟ್ಟನ್ನು ತೋರಿಸಿರುವ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಈ ಘಟನೆಯಿಂದ ಸಿಟ್ಟಿಗೆದ್ದ ಚಾಲಕರು ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ ವಿದ್ಯಾರ್ಥಿಗಳ ವಿರುದ್ಧ ಕಿಡಿಕಾರಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ದಾರಿ ಮಧ್ಯೆ ಬಸ್ ನಿಂತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ಓದಿ: ಮಂಗಳೂರು: ಯುವಕನಿಗೆ ಚೂರಿ ಇರಿತ ಪ್ರಕರಣ!!! ವೈಯಕ್ತಿಕ ದ್ವೇಷಕ್ಕೆ ಗಲಾಟೆ, ಪೊಲೀಸರ ಮಿಂಚಿನ ಕಾರ್ಯಾಚರಣೆ, ಮೂವರು ಆರೋಪಿಗಳ ಸೆರೆ
