Home » ಬೆಳ್ತಂಗಡಿ:ಗುರುವಾಯನಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ|ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು

ಬೆಳ್ತಂಗಡಿ:ಗುರುವಾಯನಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ|ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು

0 comments

ಬೆಳ್ತಂಗಡಿ:ಟಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ನಿಷಿಯನ್ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಮೂಲತಃ ಸಕಲೇಶಪುರ ನಿವಾಸಿ, ಪ್ರಸ್ತುತ
ತಣ್ಣೀರುಪಂತದ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ಅರುಣ್(23) ಎಂದು ತಿಳಿದುಬಂದಿದೆ.ಈ ಘಟನೆ ಶನಿವಾರ ನಡೆದಿದ್ದು ಅಪಘಾತದಿಂದ ಗಂಭೀರ
ಗಾಯಗೊಂಡಿದ್ದ ಅವರು ರವಿವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಯುವಕ ಕಳೆದ ಒಂದು ವರ್ಷದಿಂದ ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ ಇರುವ ಟಯರ್ ಕೇರ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಆಗಿ ದುಡಿಯುತ್ತಿದ್ದರು. ಇವರು ಎಂದಿನಂತೆ ಕೆಲಸ ಮುಗಿಸಿ ರಾತ್ರಿ 8.00 ಕ್ಕೆ ಬೈಕಿನಲ್ಲಿ ತಣ್ಣೀರುಪಂತ ಕಡೆಗೆ ಹೊರಟವರು ಗುರುವಾಯನಕೆರೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಧರ್ಮಸ್ಥಳದ ವ್ಯಕ್ತಿ ಚಲಾಯಿಸುತ್ತಿದ್ದ ಶಿಫ್ಟ್ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ.

ಈ ವೇಳೆ ಕಾರಿನ ಮುಂಭಾಗದ ಟಯರ್ ಒಡೆದು ಹೋಗಿದ್ದು,ಅರುಣ್ ಚಲಾಯಿಸುತ್ತಿದ್ದ ಬೈಕ್ ನುಜ್ಜುಗುಜ್ಜಾಗಿದೆ. ಈ ವೇಳೆ ಅರುಣ್ ಅವರ ಎರಡೂ ಕಾಲುಗಳು ಜಜ್ಜಿಯಾಗಿದ್ದು ತೀವ್ರ ರಕ್ತಸ್ರಾವವಾಗಿತ್ತು.ಅಪಘಾತ ಆದ ತಕ್ಷಣ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ರವಿವಾರ ಬೆಳಗ್ಗೆ ಅವರು ಅಸುನೀಗಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣಾ ಎಸ್.ಐ ಓಡಿಯಪ್ಪ ಮತ್ತು ಸಿಬ್ಬಂದಿಗಳು ಧಾವಿಸಿ ಅಗತ್ಯ ಕಾನೂನು ಕ್ರಮ ಜರುಗಿಸಿದರು.

You may also like

Leave a Comment