Sowjanya case: ಧರ್ಮಸ್ಥಳದ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಹಲವಾರು ಸಂಘಟನೆಗಳು ಸಾಥ್ ನೀಡಿದ್ದು, ಪರ – ಅಪ ಪ್ರಚಾರಗಳ ನಡುವೆಯೂ ನಡೆಯುತ್ತಿರುವ ಹೋರಾಟಕ್ಕೆ ಸಾಂಸ್ಥಿಕ ಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತಹಾ ಮಹತ್ತರ ಡೆವಲಪ್ಮೆಂಟ್ ಈಗ ಆಗಿದ್ದು, ಹಿಂದೆಂದೂ ಆಗದ ರೀತಿಯಲ್ಲಿ ಹೋರಾಟವು ತನ್ನ ಶಕ್ತಿಯನ್ನು ಕ್ರೋಢೀಕರಿಸಿಕೊಂಡಿದೆ.
ಇಂದು, ಸೌಜನ್ಯ(Sowjanya case) ಹೋರಾಟ ಸಮಿತಿ ಹಾಗೂ ಜಿಲ್ಲೆಯ ಒಕ್ಕಲಿಗ ಗೌಡ ಸಂಘದ ಪದಾಧಿಕಾರಿಗಳು ಒಕ್ಕಲಿಗ ಸಮುದಾಯದ ಪರಮೋಚ್ಛ ಶ್ರದ್ದಾ ಕೇಂದ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಭರಿತ ಚರ್ಚೆ ನಡೆಸಿದರು.

ಈ ಹಿಂದೆ ಆದಿಚುಂಚನಗಿರಿ ಕಾವೂರು ಮಠದ ಶ್ರೀ ಡಾ. ಧರ್ಮಪಾಲನಾಥ ಶ್ರೀಗಳನ್ನು ಭೇಟಿಯಾಗಿದ್ದ ಕುಟುಂಬಕ್ಕೆ ಹೋರಾಟಕ್ಕೆ ಬೆಂಬಲದ ಭರವಸೆ ನೀಡಿದ್ದ ಬೆನ್ನಲ್ಲೇ ಸೆಪ್ಟೆಂಬರ್ 03 ರಂದು ಬೆಳ್ತಂಗಡಿಯಲ್ಲಿ ನಡೆದಿದ್ದ ಹೋರಾಟದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ತಮ್ಮ ನೇರ ನುಡಿಗಳಿಂದ ಅವರು ಸೌಜನ್ಯ ಹತ್ಯ ಪ್ರಕರಣವನ್ನು ಖಂಡಿಸಿದ್ದರು ಮತ್ತು ಮರುತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಇದೀಗ ಆದಿಚುಂಚನಗಿರಿ ಮಹಾ ಸಂಸ್ಥಾನವನ್ನು ಕಾವೂರು ಸ್ವಾಮೀಜಿ ಸಹಿತ ದಕ್ಷಿಣ ಕನ್ನಡ ತಂಡ ಭೇಟಿಯಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಸಮಿತಿಗಳ ಪದಾಧಿಕಾರಿಗಳ ಸಹಿತ ಸೌಜನ್ಯ ಕುಟುಂಬ ಸೇರಿ ಸುಮಾರು 150 ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಮುಖಂಡರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿದ್ದು, ಸುದೀರ್ಘ ಕಾಲ ಮಾತುಕತೆ ನಡೆಸಲಾಯಿತು.
ಮಹತ್ವದ ಮಾತು ಹೇಳಿದ ಸ್ವಾಮೀಜಿ !
“ಇಂತಹದೊಂದು ಹೇಯ, ಬರ್ಬರ ಕೃತ್ಯ ನಡೆದಿರುವುದು ಬೇಸರದ ವಿಚಾರವಾಗಿದೆ. ಇದು ಒಕ್ಕಲಿಗ ಸಮುದಾಯದ ಹುಡುಗಿಯ ಪ್ರಶ್ನೆಯಲ್ಲ. ಇದು ಸಮಗ್ರ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಸತ್ಯದ ಪರ ಮತ್ತು ನ್ಯಾಯದ ಪರ ಆದಿಚುಂಚನಗಿರಿ ಯಾವತ್ತೂ ಮಾದರಿಯಾಗಿ ನಿಲ್ಲುತ್ತದೆ” ಎಂದಿದ್ದಾರೆ.
ಸೌಜನ್ಯ ನ್ಯಾಯಕ್ಕಾಗಿ ಕಾನೂನು ತಜ್ಞರ ಸಲಹೆಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಘಟನೆಯ ಗಂಭೀರತೆ ಮನವರಿಕೆ ಮಾಡುವ ಹಾಗೂ ಆಕೆಯ ಸಾವಿನ ನ್ಯಾಯಕ್ಕಾಗಿ ಕಾನೂನಿನ ಮೂಲಕ ಆಗಬೇಕಾದ ಸೂಕ್ತ ವ್ಯವಸ್ಥೆಗಳನ್ನು ಪೂರೈಸುವ ಬಗ್ಗೆ ಶ್ರೀಗಳು ಭರವಸೆ ನೀಡಿದ್ದಾರೆ.
ಅಲ್ಲದೇ ಈಗಾಗಲೇ ನಡೆಯುತ್ತಿರುವ ಹೋರಾಟದ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದ ಶ್ರೀಗಳು ಆಕೆ ಒಕ್ಕಲಿಗ ಸಮಾಜದ ಹುಡುಗಿ ಎನ್ನುವ ಯೋಚನೆ ಪಕ್ಕಕ್ಕಿಟ್ಟು ನಾವು ಯೋಚಿಸಬೇಕು. ಎಲ್ಲಾ ಸಮಾನ ಮನಸ್ಕರು ಸೇರಿ ನಡೆಸಿರುವ ಹೋರಾಟ ನಿಜಕ್ಕೂ ಶ್ಲಾಘನೀಯ. ಇದರ ಸಮಗ್ರ ಮರು ತನಿಖೆಗೆ ಮಾಡುತ್ತಿರುವ ನಿಮ್ಮೆಲ್ಲ ಹೋರಾಟ ಫಲ ನೀಡಲಿದೆ. ಆಕೆಯ ನ್ಯಾಯಕ್ಕಾಗಿ ಬೇಕಾದ ಕಾನೂನು ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಶ್ರೀಗಳು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವಾರದ ಒಳಗೆ ಮುಖ್ಯಮಂತ್ರಿಗೆ ಒತ್ತಾಯ:
ಒಂದು ವಾರದ ಒಳಗೆ ಮುಖ್ಯಮಂತ್ರಿಯವರನ್ನು ಸೌಜನ್ಯ ತನಿಖೆಯನ್ನು ಎಸ್ ಐ ಟಿ ಅಥವಾ ಇನ್ಯಾವುದೇ ಮರುತನಿಖೆಗಾಗಿ ಒತ್ತಾಯ ಮಾಡಲಾಗುವುದು ಎಂದು ಸ್ವಾಮೀಜಿಯವರು ಹೇಳಿದ್ದಾರೆ. ಅದಕ್ಕೆ ಮೊದಲು, ಸಮಗ್ರವಾಗಿ ಕೇಸಿನ ಬಗ್ಗೆ ಅಧ್ಯಯನ ಮಾಡಲಾಗುವುದು ಎಂದಿದ್ದಾರೆ.
ಮಂಗಳೂರು ಶ್ರೀ ಆದಿಚುಂಚನಗಿರಿಯ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮುಖೇನ ಸೌಜನ್ಯ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಡಿ ಬಿ ಬಾಲಕೃಷ್ಣ ಮತ್ತಿತರ ಮುಖಂಡರ ತಂಡದ ನೇತೃತ್ವದಲ್ಲಿ ಸ್ವಾಮೀಜಿಗಳ ಭೇಟಿ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ವಾಮೀಜಿಗಳಿಗೆ ಸೌಜನ್ಯ ಪರ ವಕೀಲರಾಗಿರುವ ಮೋಹಿತ್ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಹೊರಡಿಸಿರುವ ಆದೇಶ ಪ್ರತಿಯನ್ನು ವಿವರಿಸಿದರು.
ಇದನ್ನೂ ಓದಿ: ಮಂಗಳೂರು ವಿವಿ ಯಲ್ಲಿ ಸೆ.19 ರಂದು ಗಣೇಶ ಪ್ರತಿಷ್ಠಾಪನೆ; ಕಲ್ಲಡ್ಕ ಪ್ರಭಾಕರ್ ಭಟ್ ಸವಾಲು!!!
