Home » ಎಗ್ ರೈಸ್ ನಲ್ಲಿ ವಿಷಬೆರೆಸಿ ಮಕ್ಕಳಿಗೆ ಕೊಟ್ಟ ತಂದೆ | ಮಗ ಸಾವು, ಮಗಳ ಸ್ಥಿತಿ ಚಿಂತಾಜನಕ !!!

ಎಗ್ ರೈಸ್ ನಲ್ಲಿ ವಿಷಬೆರೆಸಿ ಮಕ್ಕಳಿಗೆ ಕೊಟ್ಟ ತಂದೆ | ಮಗ ಸಾವು, ಮಗಳ ಸ್ಥಿತಿ ಚಿಂತಾಜನಕ !!!

0 comments

ಇಲ್ಲೊಬ್ಬ ಪತಿ ತನ್ನ ಪತ್ನಿ ಮೇಲಿನ ಕೋಪಕ್ಕೆ ಎಗ್‌ರೈಸ್‌ನಲ್ಲಿ ವಿಷ ಬೆರೆಸಿ ಎರಡೂವರೆ ವರ್ಷದ ಮಗನನ್ನೇ ಕೊಂದಿದ್ದಾನೆ. ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಈ ರೀತಿಯ ಅಮಾನುಷ ಘಟನೆ ತಾಳಿಕೋಟೆ ತಾಲೂಕಿನ ಗೋನಾಳ ಎಸ್.ಎಚ್. ಗ್ರಾಮದಲ್ಲಿ ಜೂ.2ರಂದೇ ನಡೆದಿದ್ದು ಜೂ. 6ರಂದು ಪ್ರಕರಣ ದಾಖಲಾಗಿದೆ.

ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಚಂದ್ರಶೇಖರ ಶಿವಪ್ಪ ಅರಸನಾಳ ಮತ್ತು ಸಾವಿತ್ರಿ ಅವರ ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಗಂಡ ಸಾಲದ ಸುಳಿಗೆ ಸಿಲುಕಿದ್ದ ಕಾರಣ ಹೆಂಡತಿಗೆ ಜಮೀನು ಮಾರಾಟ ಮಾಡಲು ಒತ್ತಡ ಹಾಕುತ್ತಿದ್ದನಂತೆ. ಹಾಗಾಗಿ ಕಳೆದ 2 ತಿಂಗಳ ಹಿಂದೆ ಮಕ್ಕಳನ್ನು ಸಾವಿತ್ರಿ ತನ್ನ ತವರು ಮನೆಗೆ ಬಿಟ್ಟಿದ್ದಳು. ಜಮೀನು ಮಾರಾಟ ಮಾಡಲು ಹೆಂಡತಿ ಸಾವಿತ್ರಿ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಬೇಸತ್ತ ಪತ್ನಿ, ತವರು ಮನೆ ಸೇರಿದ್ದಳು.

ಜೂ.2ರಂದು ಸಾವಿತ್ರಿಯ ತವರು ಮನೆಗೆ ತನ್ನ ಸಹೋದರರೊಂದಿಗೆ ಬಂದ ಚಂದ್ರಶೇಖರ, ಆಸ್ತಿ ಮಾರಲು ಒಪ್ಪಿಗೆ ಕೇಳಿದ್ದಾರೆ. ಆಗಲೂ ಸಾವಿತ್ರಿ ಯಾವುದೇ ಕಾರಣಕ್ಕೂ ಆಸ್ತಿ ಮಾರುವುದಿಲ್ಲ ಬೇಕಾದರೆ ಎಲ್ಲರೂ ದುಡಿದು ಸಾಲ ತೀರಿಸೋಣ ಎಂದಿದ್ದಾಳೆ. ಬಂದ ದಾರಿಗೆ ಸುಂಕವಿಲ್ಲ ಎಂದು ಸಂಬಂಧಿಕರೆಲ್ಲ ವಾಪಸ್ ಹಿಂತಿರುಗಿದ್ದಾರೆ. ಆದರೆ ಚಂದ್ರಶೇಖರ ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದ. ಅಂದು ಸಂಜೆ ಹೋಟೆಲ್‌ನಿಂದ ಎಗ್ ರೈಸ್ ತಂದು ಪತ್ನಿಗೆ ಕೊಟ್ಟಿದ್ದ. ಮನೆ ಕೆಲಸದಲ್ಲಿ ಬಿಜಿಯಾದ ಸಾವಿತ್ರಿ, ಮಕ್ಕಳಿಗೆ ತಿನ್ನಲು ಕೊಟ್ಟಿದ್ದಳು.

banner

ಎಗ್‌ರೈಸ್‌ ತಿನ್ನುತ್ತಿದ್ದಂತೆ ವಾತಿ ಮಾಡಿಕೊಂಡ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ ಎರಡೂವರೆ ವರ್ಷದ ಮಗ ಶಿವರಾಜ ಕೊನೆಯುಸಿರೆಳೆದ. ಗಂಭೀರ ಸ್ಥಿತಿಯಲ್ಲಿದ್ದ 5 ವರ್ಷದ ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಾಯಿ ಸಾವಿತ್ರಿ, ಜೂ.3ರಂದೇ ಮಗನ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಳು. ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳನ್ನು ನೋಡಿಕೊಳ್ಳಲು ತಂದೆಯನ್ನು ಬಿಟ್ಟು ಆಸ್ಪತ್ರೆಯ ವೆಚ್ಚ ಭರಿಸಲು ಹಣಕ್ಕಾಗಿ ಸಾವಿತ್ರಿ ತವರೂರು ಗೋನಾಳಕ್ಕೆ ಹೋಗಿದ್ದಳು. ಆ ವೇಳೆ ಮನೆಗೆ ಬಂದ ಚಂದ್ರಶೇಖರ, ಸಾಲಕ್ಕೆ ಅಂಜಿ ಸಾಯಲು ನಿರ್ಧರಿಸಿದೆ. ಅದಕ್ಕಾಗಿ ಎಲ್ಲರೂ ಒಟ್ಟಿಗೆ ಸಾಯಲೆಂದು ಎಗ್‌ರೈಸ್‌ನಲ್ಲಿ ವಿಷ ಬೆರೆಸಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೂ.6ರಂದು ತಾಳಿಕೋಟೆ ಠಾಣೆಯಲ್ಲಿ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

You may also like

Leave a Comment