Anjanadri: ಹನುಮ ಜನ್ಮಸ್ಥಳದಲ್ಲಿ ಪ್ರಸಿದ್ಧಿ ಪಡೆದಿರುವ ಅಂಜನಾದ್ರಿ ಬೆಟ್ಟದ ದೇವಾಲಯದೊಳಗೆ ಗರ್ಭಗುಡಿಯೊಳಗಡೆ ಇಬ್ಬರು ಸ್ವಾಮೀಜಿಗಳು ಹೊಡೆದಾಡಿಕೊಂಡಿರುವಂತಹ ವಿಚಿತ್ರ ಘಟನೆ ನಡೆದಿದೆ. ಸ್ವಾಮೀಜಿಗಳ ಹೊಡೆದಾಟವನ್ನು ಕಂಡು ಹನುಮಂತ ಮೂಕನಾಗಿ ಕುಳಿತಿದ್ದಾನೆ.
ಹೌದು, ಅಂಜನಾದ್ರಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಹಂಪಿಯ ಗೋವಿಂದಾನಂದ ಸರಸ್ವತಿ ವಿರುದ್ಧ ಆರೋಪ ಮಾಡಲಾಗಿದೆ. ಹೀಗಾಗಿ ಅಂಜನಾದ್ರಿಯ ಆಂಜನೇಯನ ಗರ್ಭಗುಡಿಯಲ್ಲೇ ಇಬ್ಬರು ಸ್ವಾಮಿಜಿಗಳ ಹೊಡೆದಾಟ ನಡೆಸಿದ್ದಾರೆ. ದೇವಸ್ಥಾನದ ಪೂಜೆ ವಿಚಾರದಲ್ಲಿ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಸ್ವಾಮೀಜಿಗಳನ್ನು ಪೊಲೀಸರು ಸಮಾಧಾನಪಡಿಸಿದ್ದಾರೆ.
ಅಂದಹಾಗೆ ಗೋವಿಂದಾನಂದರು ಪೂಜಿಸುತ್ತಿದ್ದ ವೇಳೆ ವಿದ್ಯದಾಸ್ ಬಾಬಾ ಆಗಮಿಸಿ ದೇಗುಲವನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆಂದು ದೂರಲಾಗಿದೆ. ಈ ವೇಳೆ ಎರಡೂ ಸ್ವಾಮೀಜಿಗಳ ನಡುವೆ ಜಗಳ ಮತ್ತು ತೀವ್ರ ವಾಕ್ಸಮರ ನಡೆದಿದೆ. ಹುಡುಗಿಯರ ಜೊತೆ ಚೆಲ್ಲಾಟ ಆಡಿ ಈಗ ದೇವಸ್ಥಾನಕ್ಕೆ ಬರುತ್ತಿದ್ದಾನೆ ಎಂದು ವಿದ್ಯದಾಸ್ ಬಾಬಾರನ್ನು ದೂರಿದ್ದಾರೆ. ಅದಕ್ಕೆ ವಿದ್ಯಾದಾಸ್ ಬಾಬಾ ನಾನೇನು ನಿಮ್ಮ ಅಮ್ಮನೊಡನೆ ಆಟವಾಡಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ರೊಚ್ಚಿಗೆದ್ದ ಗೋವಿಂದಾನಂದ ಶ್ರೀ ಇಡೀ ಭಾರತದ ಎಲ್ಲಾ ಹೆಣ್ಣುಮಕ್ಕಳೂ ನನ್ನ ತಾಯಿಯರೇ ಎಂದು ತಿರುಗೇಟು ನೀಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ವಿದ್ಯಾದಾಸ ಬಾಬಾ ಸ್ವಾಮೀಜಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೂಜಾ ಕಾರ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
